HomeGadag Newsಮೋಡ ಬಿತ್ತನೆಗಿಂತ ರೈತರಿಗೆ ನೇರ ಪರಿಹಾರ ನೀಡಿ: ಯಲ್ಲಪ್ಪಗೌಡ್ರ ಕರಮಡಿ

ಮೋಡ ಬಿತ್ತನೆಗಿಂತ ರೈತರಿಗೆ ನೇರ ಪರಿಹಾರ ನೀಡಿ: ಯಲ್ಲಪ್ಪಗೌಡ್ರ ಕರಮಡಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಡಂಬಳ: ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಸರ್ಕಾರ ಸುಮಾರು ₹27 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಕೈಗೊಳ್ಳಲು ಮುಂದಾಗಿರುವುದನ್ನು ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪಗೌಡ್ರ ಕರಮಡಿ ವಿರೋಧಿಸಿದ್ದಾರೆ.

ಡಂಬಳ ಹೋಬಳಿಯ ಪೇಠಾ ಆಲೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಎಂಟು ದಿನಗಳ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯದ ರೈತರ ಸಮಸ್ಯೆಗಳು, ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯ ಕುರಿತು ಸಮರ್ಪಕವಾಗಿ ಧ್ವನಿ ಎತ್ತಿ, ರೈತರ ನೆರವಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ನೇರ ಪರಿಹಾರ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಆದರೆ ₹27 ಕೋಟಿ ವೆಚ್ಚ ಮಾಡಿ ಮೋಡ ಬಿತ್ತನೆ ಮಾಡುವ ನಿರ್ಧಾರ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುದನ್ನು ಸರ್ಕಾರ ಮರುಪರಿಶೀಲಿಸಬೇಕು ಎಂದು ಹೇಳಿದರು.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮೋಡ ಬಿತ್ತನೆಗೆ ಸುಮಾರು ₹27 ಕೋಟಿ ವೆಚ್ಚದಲ್ಲಿ 60 ದಿನಗಳ ಕಾರ್ಯಾಚರಣೆ ನಡೆಸುವ ಕುರಿತು ಹೇಳಿಕೆ ನೀಡಿದ್ದಾರೆ. ಹಿಂದೆಯೂ ರಾಜ್ಯದಲ್ಲಿ ಮೋಡ ಬಿತ್ತನೆ ಪ್ರಯೋಗಗಳು ನಡೆದಿದ್ದು, ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ದೊರೆತಿಲ್ಲ. ಹೀಗಾಗಿ ಮತ್ತೊಮ್ಮೆ ಸಾರ್ವಜನಿಕರ ತೆರಿಗೆ ಹಣವನ್ನು ಇಂತಹ ಪ್ರಯೋಗಕ್ಕೆ ಬಳಸುವುದು ಸೂಕ್ತವಲ್ಲ ಎಂದು ಯಲ್ಲಪ್ಪಗೌಡ್ರ ಕರಮಡಿ ಹೇಳಿದರು.

ಮೋಡ ಬಿತ್ತನೆಯ ಯಶಸ್ಸಿನ ಪ್ರಮಾಣ ಕಡಿಮೆ ಇರುವ ಸಂದರ್ಭದಲ್ಲಿ ₹27 ಕೋಟಿಯನ್ನು ಮಳೆ ಕೊರತೆಯಿಂದ ಹಾನಿಗೊಳಗಾದ ರೈತರಿಗೆ ನೇರ ಪರಿಹಾರವಾಗಿ ನೀಡಬೇಕು. ರಾಜ್ಯದ ಮಳೆ ಕೊರತೆಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಅಗತ್ಯವಿರುವ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ಬೆಳೆ ನಷ್ಟ ಪರಿಹಾರ, ಸಾಲ ಸೌಲಭ್ಯ ಹಾಗೂ ಇತರ ನೆರವುಗಳನ್ನು ತುರ್ತಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.

ರೈತರ ಕಣ್ಣೀರು ಒರೆಸುವುದು ಸರ್ಕಾರದ ಮೊದಲ ಕರ್ತವ್ಯ. ಮೋಡ ಬಿತ್ತನೆಗೆ ಹಣ ವ್ಯಯಿಸುವ ಬದಲು ಸಂಕಷ್ಟದಲ್ಲಿರುವ ರೈತರಿಗೆ ನೇರ ಪರಿಹಾರ ನೀಡಬೇಕು.

— ಯಲ್ಲಪ್ಪಗೌಡ್ರ ಕರಮಡಿ, ಜಿಲ್ಲಾಧ್ಯಕ್ಷ, ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ, ಗದಗ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img