ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರವಾದಿ ಹಜರತ್ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಗ್ರಾಮದಲ್ಲಿ ಬುಧವಾರ ಈದ್ ಮಿಲಾದ್ ಆಚರಣೆ ಹಾಗೂ ಧಾರ್ಮಿಕ ಮೆರವಣಿಗೆ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ನಡೆಯಿತು.
ಗ್ರಾಮದ ಜುಮ್ಮಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆಗೆ ಧರ್ಮಗುರುಗಳು ಹಾಗೂ ಸಮಾಜದ ಮುಖಂಡರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನೂರಾರು ಮುಸ್ಲಿಂ ಬಾಂಧವರು, ಯುವಕರು ಹಾಗೂ ಮಕ್ಕಳು ಪಾಲ್ಗೊಂಡು ಪ್ರವಾದಿಯ ಸಂದೇಶಗಳನ್ನು ಸಾರಿದರು.
ಪ್ರವಾದಿ ಮುಹಮ್ಮದ್ ಅವರು ಜಗತ್ತಿಗೆ ಶಾಂತಿ, ಸೌಹಾರ್ದತೆ ಹಾಗೂ ಮಾನವೀಯತೆಯ ಸಂದೇಶ ಸಾರಿದರು. ಸಮಾಜದಲ್ಲಿ ಶಾಂತಿ ನೆಲೆಸಬೇಕು ಎಂಬುದೇ ಅವರ ಆಶಯವಾಗಿತ್ತು. ಅವರ ಜೀವನದ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಧರ್ಮಗುರು ಖಾದರಸಾಬ ಮುಲ್ಲಾ ಹೇಳಿದರು.
ಮುಂಜಾನೆ ಆರಂಭವಾದ ಮೆರವಣಿಗೆ ಬೆಳಗ್ಗೆ 11.30ರವರೆಗೆ ನಡೆಯಿತು. ಮಾರ್ಗದುದ್ದಕ್ಕೂ ಪ್ರವಾದಿ ಮುಹಮ್ಮದ್ ಅವರ ಪರ ಘೋಷಣೆಗಳು ಮೊಳಗಿದವು. ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಜಮಾಲಶಾವಲಿ ಶರಣರ ದರ್ಗಾ ಬಳಿ ಭಕ್ತರಿಗೆ ಗಂಜಿ ಹಾಗೂ ಬಾಳೆಹಣ್ಣು ವಿತರಿಸಲಾಯಿತು.
ದೇಶದ ಪ್ರಗತಿ, ಎಲ್ಲ ಧರ್ಮಗಳ ಜನರ ಶ್ರೇಯಸ್ಸು ಹಾಗೂ ಗ್ರಾಮದಲ್ಲಿ ಉತ್ತಮ ಮಳೆ-ಬೆಳೆಗಾಗಿ ಮಸೀದಿ ಮತ್ತು ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.
ಈ ಸಂದರ್ಭದಲ್ಲಿ ಧರ್ಮಗುರುಗಳಾದ ಬಶೀರಹಮ್ಮದ ತಾಂಬೋಟಿ, ಖಾಜಾಹುಸೇನ ಹೊಸಪೇಟಿ, ಬಾಬುಸಾಬ ಮೂಲಿಮನಿ, ಜಾಕೀರ ಮೂಲಿಮನಿ, ಹುಸೇನಸಾಬ ದೊಡ್ಡಮನಿ, ಇಂಮತ್ಯಾಜ ದಪೇದಾರ, ಹುಸೇನಸಾಬ ಹೊಸಬಾವಿ, ಮುನ್ನಾ ನದಾಫ್, ಹಜರತಲಿ ಹೊಂಬಳ, ಇಮಾಮ ಹೊಂಬಳ, ರಫೀಕ ಮನಿಯಾರ, ರಜಾಕಸಾಬ ತಾಂಬೋಟಿ, ಶಪೀಕ ಮೂಲಿಮನಿ, ಬುಡ್ನೆಸಾಬ ಅತ್ತಾರ, ಮೋದಿನಸಾಬ ಚಾಂದಖಾನವರ, ಮೀರಾಸಾಬ ದೊಡ್ಡಮನಿ, ಮಹಮ್ಮದಗೌಸ ಅತ್ತಾರ, ನಜೀರ ಸರಕಾವಾಸ್, ಮುರ್ತುಜಾ ಮನಿಯಾರ, ರಾಯಸಾಬ ಹಳ್ಳಿಕೇರಿ, ಗೌಸುಸಾಬ ಆಲೂರ, ಡಿ.ಡಿ. ಸೊರಟೂರ ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು, ಯುವಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.



