ಮನೆ ಸುಂದರವಾಗಿ ಕಾಣಬೇಕು, ಜೊತೆಗೆ ಹಸಿರಿನ ವಾತಾವರಣವೂ ಇರಬೇಕು ಅನ್ನೋ ಕಾರಣಕ್ಕೆ ಇತ್ತೀಚೆಗೆ ಹಲವರು ಕೃತಕ ಗಿಡಗಳನ್ನು ಅಲಂಕಾರಕ್ಕಾಗಿ ಬಳಸುತ್ತಿದ್ದಾರೆ.
ವಿಶೇಷವಾಗಿ ಸೂರ್ಯನ ಬೆಳಕು ಕಡಿಮೆ ಇರುವ ಕೋಣೆಗಳು ಹಾಗೂ ಸಣ್ಣ ಅಪಾರ್ಟ್ಮೆಂಟ್ಗಳಲ್ಲಿ ಕೃತಕ ಗಿಡಗಳ ಬಳಕೆ ಹೆಚ್ಚಾಗಿದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇವುಗಳನ್ನು ಇಡುವಾಗ ಕೆಲವು ವಿಚಾರಗಳನ್ನು ಗಮನಿಸುವುದು ಅಗತ್ಯ.
ವಾಸ್ತು ಪ್ರಕಾರ ಎಲ್ಲಾ ಕೃತಕ ಗಿಡಗಳನ್ನೂ ಅಶುಭ ಎಂದು ಹೇಳಲಾಗುವುದಿಲ್ಲ. ಉತ್ತಮ ಗುಣಮಟ್ಟದ ಹಾಗೂ ಸ್ವಚ್ಛವಾಗಿರುವ ಕೃತಕ ಗಿಡಗಳನ್ನು ಅಲಂಕಾರಕ್ಕಾಗಿ ಬಳಸಬಹುದು. ಆದರೆ ಧೂಳು ಹಿಡಿದ, ಮುರಿದ ಅಥವಾ ಬಣ್ಣ ಕಳೆದುಕೊಂಡ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ.
ಇನ್ನು ಜೀವಂತ ಗಿಡಗಳಿಗೆ ವಾಸ್ತುದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ನೈಸರ್ಗಿಕ ಸಸ್ಯಗಳು ಬೆಳವಣಿಗೆ, ತಾಜಾತನ ಮತ್ತು ಹಸಿರನ್ನು ಪ್ರತಿನಿಧಿಸುತ್ತವೆ ಎಂಬ ನಂಬಿಕೆ ಇದೆ. ತುಳಸಿ ಹಾಗೂ ಮನಿ ಪ್ಲಾಂಟ್ನಂತಹ ಗಿಡಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಸಕಾರಾತ್ಮಕ ವಾತಾವರಣ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ವಾಸ್ತು ನಂಬಿಕೆ ಹೇಳುತ್ತದೆ.
ದೇವರ ಕೋಣೆಯಲ್ಲಿ ಕೃತಕ ಗಿಡ ಬೇಡ:
ಮನೆಯ ಪೂಜಾ ಅಥವಾ ಪ್ರಾರ್ಥನಾ ಕೊಠಡಿಯನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇಲ್ಲಿ ಕೃತಕ ಗಿಡಗಳ ಬದಲಿಗೆ ತಾಜಾ ಹೂವುಗಳು ಅಥವಾ ನೈಸರ್ಗಿಕ ಹಸಿರನ್ನು ಬಳಸುವುದು ಉತ್ತಮ ಎನ್ನಲಾಗುತ್ತದೆ. ದೇವರ ಕೋಣೆಯನ್ನು ಅನಗತ್ಯ ಅಲಂಕಾರಿಕ ವಸ್ತುಗಳಿಂದ ತುಂಬಿಸದೆ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ.
ಬೆಡ್ರೂಮ್ನಲ್ಲೂ ಎಚ್ಚರಿಕೆ:
ಮಲಗುವ ಕೋಣೆಯಲ್ಲಿ ಹೆಚ್ಚು ಕೃತಕ ಗಿಡಗಳನ್ನು ಇಡುವುದನ್ನು ತಪ್ಪಿಸುವುದು ಉತ್ತಮ ಎಂದು ವಾಸ್ತು ಹೇಳುತ್ತದೆ. ನೋಟಕ್ಕೆ ಆಕರ್ಷಕವಾಗಿದ್ದರೂ, ನೈಸರ್ಗಿಕ ಸಸ್ಯಗಳಲ್ಲಿರುವ ಚೈತನ್ಯ ಕೃತಕ ಗಿಡಗಳಲ್ಲಿ ಇರುವುದಿಲ್ಲ ಎಂಬ ನಂಬಿಕೆ ಇದೆ.
ಮುಖ್ಯ ದ್ವಾರದಲ್ಲಿ ಹಾಳಾದ ಗಿಡ ಬೇಡ:
ಮನೆಯ ಮುಖ್ಯ ದ್ವಾರವನ್ನು ಶಕ್ತಿಯ ಪ್ರವೇಶದ್ವಾರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇಲ್ಲಿ ಧೂಳು ಹಿಡಿದ, ಮುರಿದ ಅಥವಾ ಹಾಳಾದ ಕೃತಕ ಗಿಡಗಳನ್ನು ಇಡುವುದು ಅಶುಭ ಎನ್ನಲಾಗುತ್ತದೆ. ಅಲಂಕಾರಕ್ಕಾಗಿ ಗಿಡಗಳನ್ನು ಇಡುತ್ತಿದ್ದರೆ ಸ್ವಚ್ಛವಾಗಿರುವ ಹಾಗೂ ಉತ್ತಮ ಸ್ಥಿತಿಯಲ್ಲಿರುವ ಗಿಡಗಳನ್ನೇ ಬಳಸುವುದು ಸೂಕ್ತ.
ಒಟ್ಟಾರೆ, ಮನೆಯ ಸೌಂದರ್ಯಕ್ಕಾಗಿ ಕೃತಕ ಗಿಡಗಳನ್ನು ಬಳಸುವುದರಲ್ಲಿ ತಪ್ಪಿಲ್ಲ ಎನ್ನಲಾಗುತ್ತದೆಯಾದರೂ, ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹಾಗೂ ಯಾವ ಸ್ಥಳದಲ್ಲಿ ಇಡಬೇಕು ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯ. ಇವೆಲ್ಲವೂ ವಾಸ್ತು ನಂಬಿಕೆಗಳ ಆಧಾರಿತ ಸಲಹೆಗಳಾಗಿದ್ದು, ವೈಜ್ಞಾನಿಕವಾಗಿ ಸಾಬೀತಾದ ನಿಯಮಗಳಲ್ಲ.



