ವಿಜಯಸಾಕ್ಷಿ ಸುದ್ದಿ, ನರಗುಂದ: ಮಾನವ ಜೀವನ ದೇವರು ನೀಡಿದ ಅಮೂಲ್ಯ ವರ. ಅರಿವುಳ್ಳ ಜನ್ಮ ಪಡೆದ ಮನುಷ್ಯ ಶಿವಜ್ಞಾನ ಹಾಗೂ ಗುರು ಕಾರುಣ್ಯ ಪಡೆದು ಬದುಕಬೇಕು. ಜೀವನದಲ್ಲಿ ದೇವರು ಹಾಗೂ ಮರಣವನ್ನು ಎಂದಿಗೂ ಮರೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ಕೊಣ್ಣೂರು ಗ್ರಾಮದ ಚಿಕ್ಕಮಠದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ನಡೆದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಾವು ನಿಂತಿರುವ ನೆಲ, ಕುಡಿಯುವ ನೀರು, ತಿನ್ನುವ ಅನ್ನ ಹಾಗೂ ಉಸಿರಾಡುವ ಗಾಳಿ ದೇವರು ನೀಡಿರುವ ಅಮೂಲ್ಯ ಕೊಡುಗೆಗಳು. ಇವುಗಳಿಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಇಷ್ಟೆಲ್ಲ ಅಮೂಲ್ಯ ಸಂಪನ್ಮೂಲಗಳನ್ನು ನೀಡಿರುವ ದೇವರನ್ನು ಸ್ಮರಿಸುವುದು ಪ್ರತಿಯೊಬ್ಬರ ಧರ್ಮವಾಗಬೇಕು ಎಂದರು.
ದೇವರು ಎಲ್ಲರಲ್ಲಿಯೂ ಇದ್ದಾನೆ. ಆದರೆ ದೇವರಲ್ಲಿ ಎಲ್ಲರೂ ಇಲ್ಲ ಎಂಬುದು ಸತ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಸಿದ್ಧಾಂತದಲ್ಲಿ ಮಾನವ ಜೀವನದ ಅಮೂಲ್ಯ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಅಂಗ ಲಿಂಗವಾಗಲು, ನರ ಹರನಾಗಲು, ಭವಿ ಭಕ್ತನಾಗಲು ಸಾಧನೆಯ ಮಾರ್ಗವನ್ನು ಬೋಧಿಸಿದ್ದಾರೆ. ಅಹಿಂಸೆಯಿಂದ ಧ್ಯಾನದವರೆಗೆ ಇರುವ ದಶಧರ್ಮ ಸೂತ್ರಗಳು ಮಾನವ ಜೀವನದ ಉನ್ನತಿ ಹಾಗೂ ಶ್ರೇಯಸ್ಸಿಗೆ ದಾರಿದೀಪವಾಗಿವೆ ಎಂದು ಹೇಳಿದರು.
ಮನುಷ್ಯ ಎಷ್ಟೇ ವರ್ಷ ಬದುಕಿದ್ದರೂ ಒಂದಲ್ಲ ಒಂದು ದಿನ ಮೃತ್ಯು ಎದುರಾಗುವುದು ನಿಶ್ಚಿತ. ಹುಟ್ಟು-ಸಾವಿನ ನಡುವಿನ ಬದುಕನ್ನು ಸಮೃದ್ಧಗೊಳಿಸಿಕೊಳ್ಳಲು ಗುರುಗಳ ಬೋಧಾಮೃತ ಅಗತ್ಯ. ಭೌತಿಕ ಬದುಕಿನೊಂದಿಗೆ ಆಂತರಿಕ ಬದುಕನ್ನೂ ಶ್ರೀಮಂತಗೊಳಿಸಿಕೊಳ್ಳಬೇಕು ಎಂದರು.
ಶ್ರೀ ಕಾಶಿ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಮಾತನಾಡಿ, ಧರ್ಮದ ಉದಾತ್ತ ಮೌಲ್ಯಗಳನ್ನು ಬದುಕಿನ ಆಚರಣೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವೀರಶೈವ ಧರ್ಮದಲ್ಲಿರುವ ಆಧ್ಯಾತ್ಮಿಕ ಸಂಪತ್ತನ್ನು ಅರಿತು, ಆಚರಿಸುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಚಿಕ್ಕಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಕೊಣ್ಣೂರು ಗ್ರಾಮದ ಭಕ್ತರ ಬಹುದಿನಗಳ ಕನಸು ಇಂದು ನನಸಾಗಿರುವುದು ಸಂತಸದ ಸಂಗತಿ. ಶ್ರೀ ರಂಭಾಪುರಿ ಹಾಗೂ ಕಾಶಿ ಜಗದ್ಗುರುಗಳು ಕೊಣ್ಣೂರಿಗೆ ಆಗಮಿಸಿರುವುದು ಭಕ್ತರ ಪುಣ್ಯದ ಫಲ ಎಂದರು.
ಸಮಾರಂಭದಲ್ಲಿ ನರಗುಂದ, ಆಲಮೇಲ, ಮಮದಾಪುರ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡರು. ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಸುಮಂಗಲೆಯರು, ಭಜನಾ ತಂಡಗಳು ಹಾಗೂ ವೀರಗಾಸೆ ಕಲಾವಿದರು ಉತ್ಸವಕ್ಕೆ ಮೆರುಗು ತಂದರು. ಬಳಿಕ ಅನ್ನದಾಸೋಹ ನಡೆಯಿತು.
ಮನುಷ್ಯ ಎಷ್ಟೇ ವರ್ಷ ಬದುಕಿದ್ದರೂ ಒಂದಲ್ಲ ಒಂದು ದಿನ ಮೃತ್ಯು ಎದುರಾಗುವುದು ನಿಶ್ಚಿತ. ಹುಟ್ಟು-ಸಾವಿನ ನಡುವಿನ ಬದುಕು ಸಮೃದ್ಧಗೊಳ್ಳಲು ಗುರು ಬೋಧಾಮೃತ ಅಗತ್ಯ.
— ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು



