ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಪಿ.ಎಸ್.ಎಸ್. ಡಾ. ಕೆ.ಬಿ. ಧನ್ನೂರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ರಚನೆಗಾಗಿ ನೈಜ ಚುನಾವಣೆಯ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆ ಯಶಸ್ವಿಯಾಗಿ ನಡೆಯಿತು.
ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆ, ಶಾಸಕಾಂಗದ ರಚನೆ ಹಾಗೂ ಮತದಾನದ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಿದ್ದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಪ್ರಚಾರ, ಮತದಾನ ಹಾಗೂ ಮತ ಎಣಿಕೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಚುನಾವಣಾ ಆಯೋಗದ ಮಾದರಿಯಲ್ಲೇ ನಡೆಸಲಾಯಿತು.
ಮತಗಟ್ಟೆ ಅಧಿಕಾರಿ, ಗುರುತಿನ ಪರಿಶೀಲನಾ ಅಧಿಕಾರಿ ಹಾಗೂ ಮತದಾನ ಅಧಿಕಾರಿಗಳ ಜವಾಬ್ದಾರಿಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸಿ ನೈಜ ಚುನಾವಣೆಯ ಅನುಭವ ಪಡೆದರು.
ಶಾಲೆಯ ಮುಖ್ಯಶಿಕ್ಷಕ ಮಂಜುನಾಥ ಗ್ರಾಮಪುರೋಹಿತ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಸುರೇಶ ಮಲ್ಲನಗೌಡ್ರ ಹಾಗೂ ಶಿಕ್ಷಕರು ಚುನಾವಣಾ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶವನ್ನು ವಿವರಿಸಿದರು.
ಚುನಾವಣೆಯಲ್ಲಿ ಐಶ್ವರ್ಯ ಪೂಜೇರ ಶಾಲಾ ಪ್ರಧಾನಿಯಾಗಿ, ಚಂದ್ರಿಕಾ ಸೂರಪ್ಪಗೌಡ್ರ ಉಪಪ್ರಧಾನಿಯಾಗಿ ಆಯ್ಕೆಯಾಗಿದ್ದು, ಇತರ 10 ವಿದ್ಯಾರ್ಥಿಗಳು ಶಾಲಾ ಸಚಿವ ಸಂಪುಟದ ವಿವಿಧ ಖಾತೆಗಳ ಜವಾಬ್ದಾರಿ ವಹಿಸಿಕೊಂಡರು.



