ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕಾರಹುಣ್ಣಿಮೆ ಅಂಗವಾಗಿ ಮುಳಗುಂದ ಪಟ್ಟಣದಲ್ಲಿ ರೈತರು ಸಂಪ್ರದಾಯಬದ್ಧವಾಗಿ ಎತ್ತುಗಳನ್ನು ಅಲಂಕರಿಸಿ ಪೂಜಿಸಿ, ವಿಶೇಷ ಆಚರಣೆಗಳ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಮುಂಗಾರು ಬಿತ್ತನೆ ಮುಗಿದ ಬಳಿಕ ರೈತರ ಮೊದಲ ಹಬ್ಬವೆಂದೇ ಕರೆಯಲಾಗುವ ಕಾರಹುಣ್ಣಿಮೆ ಹಿನ್ನೆಲೆಯಲ್ಲಿ ಎತ್ತುಗಳ ನಾಲಿಗೆಗೆ ಅರಿಶಿಣ ಹಾಗೂ ಉಪ್ಪಿನ ಮಿಶ್ರಣ ಹಚ್ಚಿ ಸ್ವಚ್ಛಗೊಳಿಸಲಾಯಿತು. ಜವಾರಿ ತತ್ತಿಗಳ ಗೊಟ್ಟ, ಬಣ್ಣಬಣ್ಣದ ಅಲಂಕಾರಗಳಿಂದ ಎತ್ತುಗಳನ್ನು ಶೃಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಂಜೆ ಪಟ್ಟಣದ ಐದು ಮನೆತನಗಳ ಎತ್ತುಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಐದು ಎತ್ತುಗಳನ್ನು ಸಾಲಾಗಿ ನಿಲ್ಲಿಸಿ ಸಂಪ್ರದಾಯದಂತೆ ‘ಕರಿ ಹರಿಯುವ’ ಆಚರಣೆ ನೆರವೇರಿಸಲಾಯಿತು. ಈ ವೇಳೆ ಹಕಾರಿಯವರ ಮನೆತನದ ಬಿಳಿ ಎತ್ತು ಕರಿ ಹರಿಯುವ ಮೂಲಕ ಎಲ್ಲರ ಗಮನ ಸೆಳೆಯಿತು.
ವಾದ್ಯಮೇಳಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ರೈತರು, ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರಹುಣ್ಣಿಮೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.



