ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಮುಂಡರಗಿ ತಾಲೂಕಿನ ಗ್ರಾಮ ಪಂಚಾಯಿತಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗದ ಕಾರಣ ಕುಡಿಯುವ ನೀರು, ಬೀದಿದೀಪ, ರಸ್ತೆ ದುರಸ್ತಿ, ಸ್ವಚ್ಛತೆ ಸೇರಿದಂತೆ ಮೂಲಭೂತ ಸೇವೆಗಳ ನಿರ್ವಹಣೆಯೇ ದುಸ್ತರವಾಗಿದೆ.
2025-26 ಹಾಗೂ 2026-27ನೇ ಸಾಲಿನ ಅನುದಾನ ಇನ್ನೂ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಪಂಚಾಯಿತಿಗಳು ತೆರಿಗೆ ಸಂಗ್ರಹದ ಹಣದಲ್ಲೇ ಆಡಳಿತ ನಡೆಸುತ್ತಿವೆ. ಒಂದು ವರ್ಷದಿಂದ ಖರೀದಿಸಿದ ಸಾಮಗ್ರಿಗಳ ಬಿಲ್ ಪಾವತಿಸಲು ಸಾಧ್ಯವಾಗದೆ, ಗುತ್ತಿಗೆದಾರರು ಮತ್ತು ಪೂರೈಕೆದಾರರಿಂದ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗಿದೆ.
ಇದರ ಜೊತೆಗೆ ಇ-ಸ್ವತ್ತು ತಂತ್ರಾಂಶದ ನಿರಂತರ ತಾಂತ್ರಿಕ ದೋಷ, ಸಿಬ್ಬಂದಿ ಕೊರತೆ ಹಾಗೂ ಹೆಚ್ಚುತ್ತಿರುವ ಸಾರ್ವಜನಿಕ ಒತ್ತಡದಿಂದ ಪಂಚಾಯಿತಿ ಆಡಳಿತ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘವು ತಕ್ಷಣ ಅನುದಾನ ಬಿಡುಗಡೆ, ಖಾಲಿ ಹುದ್ದೆಗಳ ಭರ್ತಿ, ತಾಂತ್ರಿಕ ಸಮಸ್ಯೆಗಳ ನಿವಾರಣೆ ಹಾಗೂ ಸಾರ್ವಜನಿಕ ಸೇವೆ ಸುಗಮಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
“15ನೇ ಹಣಕಾಸು ಆಯೋಗದ ಅನುದಾನ ಬಂದಿಲ್ಲ. ತೆರಿಗೆ ಸಂಗ್ರಹದ ಹಣದಲ್ಲೇ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಸಿಬ್ಬಂದಿ ವೇತನ ನಿರ್ವಹಿಸುತ್ತಿದ್ದೇವೆ. ಅನುದಾನ ಬಿಡುಗಡೆಯಾಗದಿದ್ದರೆ ಗ್ರಾಮಗಳ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಲಿದೆ.”
– ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮುಂಡರಗಿ ತಾಲೂಕು



