ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜನಸಹಭಾಗಿತ್ವದಿಂದ ಅಸಾಧ್ಯವೂ ಸಾಧ್ಯ ಎಂಬುದನ್ನು ಲಕ್ಷ್ಮೇಶ್ವರ ಪಟ್ಟಣದ 3ನೇ ವಾರ್ಡಿನ ಬೇವಿನಮರದ ಓಣಿಯ ನಿವಾಸಿಗಳು ಸಾಬೀತುಪಡಿಸಿದ್ದಾರೆ. ಹಲವು ವರ್ಷಗಳಿಂದ ಶಿಥಿಲಗೊಂಡಿದ್ದ ಸಾಂಪ್ರದಾಯಿಕ ಸೇದು ಬಾವಿಯನ್ನು ಸ್ಥಳೀಯರು ಶ್ರಮದಾನ ಹಾಗೂ ಸ್ವಂತ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಬಾವಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಕುಸಿದಿದ್ದ ಗೋಡೆ ದುರಸ್ತಿ, ಸುರಕ್ಷತಾ ಕಟ್ಟೆ ನಿರ್ಮಾಣ ಹಾಗೂ ಕಬ್ಬಿಣದ ಗೇಟ್ ಅಳವಡಿಸುವ ಮೂಲಕ ಮತ್ತೆ ಸಾರ್ವಜನಿಕ ಬಳಕೆಗೆ ಸಜ್ಜುಗೊಳಿಸಲಾಗಿದೆ.
ಜೀರ್ಣೋದ್ಧಾರ ಪೂರ್ಣಗೊಂಡ ಬಳಿಕ ಓಣಿಯ ಮಹಿಳೆಯರು ಗಂಗಾಮಾತೆಗೆ ಉಡಿ ತುಂಬಿ ವಿಶೇಷ ಪೂಜೆ ಸಲ್ಲಿಸಿ ಬಾವಿಯ ಪುನರುಜ್ಜೀವನವನ್ನು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಗಣಪತಿ ಬೇವಿನಮರದ, ಹೊನ್ನಪ್ಪ ವಡ್ಡರ, ಶಂಕರ ಬ್ಯಾಡಗಿ, ನಾಗರಾಜ ಕೊಂಗಿ, ಮಂಜುನಾಥ ಬೇವಿನಮರದ, ಗಣೇಶ ನೂಲ್ವಿ, ಮುರಘೇಂದ್ರಸ್ವಾಮಿ ಹಿರೇಮಠ, ಶಿವಣ್ಣ ಪಾಣಿಗಟ್ಟಿ ಸೇರಿದಂತೆ ಸ್ಥಳೀಯ ನಾಗರಿಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
“ಸಾಂಪ್ರದಾಯಿಕ ಜಲಮೂಲಗಳ ಸಂರಕ್ಷಣೆ ಇಂದಿನ ಅಗತ್ಯ. ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ನಾಗರಿಕರೇ ಒಗ್ಗಟ್ಟಿನಿಂದ ಮಾಡಿ ಮಾದರಿಯಾಗಿದ್ದಾರೆ.”
– ಮಂಜುನಾಥ ಮಾಗಡಿ, ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ



