ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರ ಹಾಗೂ ನಾಣಿಕೇರಿ ಗ್ರಾಮದ ರೈತರು ಉತ್ತಮ ಮಳೆಗಾಗಿ ದೇವರಿಗೆ ವಿಶೇಷ ಜಲಾಭಿಷೇಕ ನೆರವೇರಿಸಿ ಹರಕೆ ತೀರಿಸಿದರು.
ರಾಜ್ಯದಾದ್ಯಂತ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ರೈತರು ಬಿತ್ತನೆ ಮಾಡಿದ ಹೊಲಗಳು ಒಣಗುತ್ತಿವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರೈತರು ವರುಣ ದೇವನ ಮೊರೆ ಹೋಗಿದ್ದಾರೆ.
ಮಂಗಳವಾರ ರಾಮನಗರ ಹಾಗೂ ನಾಣಿಕೇರಿ ರೈತಾಪಿ ವರ್ಗದವರು ಗ್ರಾಮದ ನರೇಗಾಲ್ ದುರ್ಗಮ್ಮ, ಗಾಳಿ ದುರ್ಗಮ್ಮ, ಗುರುಭವನದ ಆಂಜನೇಯ, ಹಗರಿ ಆಂಜನೇಯ, ಈಶ್ವರ ದೇವಸ್ಥಾನ ಹಾಗೂ ಶ್ರೀ ಪತ್ರಿ ಬಸವೇಶ್ವರ ದೇವಸ್ಥಾನಗಳಿಗೆ ಜಲಾಭಿಷೇಕ ನೆರವೇರಿಸಿ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಳೆಗಾಗಿ ಕಪ್ಪೆಗಳಿಗೆ ಮದುವೆ, ಕತ್ತೆಗಳಿಗೆ ಮದುವೆ, ಗುರ್ಜಿ ಹೊರಿಸುವುದು, ಜಲಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸುವುದು ಗ್ರಾಮೀಣ ಭಾಗದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ಬಾರಿ ಸಹ ಮಳೆಗಾಗಿ ದೇವರಲ್ಲಿ ವಿಶೇಷ ಹರಕೆ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಕುರುಬರ ಬಸವರಾಜ್, ಚಿಗರಿ ಅಜ್ಜಯ್ಯ, ಕುರುಬರ ರಾಘವೇಂದ್ರ, ಜೋಗಪ್ಪನವರ ಯಮನೂರಿ, ಕುರುಬರ ಕಾರ್ತೀಕ್, ಜೋಗಿ ಅಕ್ಷಯ್, ಕಾಗಿ ಉಮೇಶ, ಸರ್ದಾರ್ ಮನು, ರಾಜು, ಬಂಟರ್ ಪ್ರಕಾಶ್, ಗಂಗಾಮತ ಸಮಾಜದ ಮುಖಂಡ ಸೆರಗಾರ್ ಹುಚ್ಚಪ್ಪ, ಪತ್ರಕರ್ತ ಸರ್ದಾರ್ ಯಮನೂರಪ್ಪ, ಕಾಟರ್ ಗಾಳಪ್ಪ, ಮಡಿವಾಳರ ಅಶೋಕ್, ಮಡಿವಾಳರ ಹನುಮೇಶ್, ಉಪ್ಪಾರ್ ಪ್ರಕಾಶ್ ಹಾಗೂ ಹುಗ್ಗಿ ಹುಲುಗಪ್ಪ ಸೇರಿದಂತೆ ರೈತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.



