ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಮೈಸೂರು ಪ್ರವಾಸದ ಹಿನ್ನೆಲೆಯಲ್ಲಿ ನಗರದಲ್ಲಿ ಅಭೂತಪೂರ್ವ ಭದ್ರತಾ ವ್ಯವಸ್ಥೆ ಜಾರಿಗೊಂಡಿದೆ. ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ನಿರ್ಮಿಸಿರುವ ‘ವಿವೇಕ ಸ್ಮಾರಕ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಪ್ರಧಾನಿ ಭೇಟಿ ಹಿನ್ನೆಲೆ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಶಿಕ್ಷಣ ಸಂಸ್ಥೆಗಳಿಗೆ ರಜೆ ಹಾಗೂ ಸ್ಮಾರಕದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಭದ್ರತಾ ದೃಷ್ಟಿಯಿಂದ ವಿವೇಕ ಸ್ಮಾರಕ ಸುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದ್ದು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ. ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿ, ನಗರವನ್ನು ಸಂಪೂರ್ಣ ನಿಗಾದಡಿ ಇಡಲಾಗಿದೆ.
ಮಹಾರಾಣಿ ಶಾಲೆ-ಕಾಲೇಜು, ಮಹಾರಾಜ ಕಾಲೇಜು, ಮರಿಮಲ್ಲಪ್ಪ ಶಾಲೆ-ಕಾಲೇಜು, ಸದ್ವಿದ್ಯ ಶಾಲೆ ಹಾಗೂ ರೋಟರಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.
ನಿರ್ಬಂಧ ಇರುವ ರಸ್ತೆ ಮಾರ್ಗಗಳು
- ಡಿಸಿ ಕಚೇರಿ ಜಂಕ್ಷನ್ – ಏಕಲವ್ಯ ವೃತ್ತ
- ಮುಡಾ ಜಂಕ್ಷನ್ – ಡಾ. ಪದ್ಮ ವೃತ್ತ
- ಪಡುವಾರಳ್ಳಿ ಜಂಕ್ಷನ್ – ಮೆಟ್ರೋಪೋಲ್ ವೃತ್ತ
- ರೈಲ್ವೆ ನಿಲ್ದಾಣ ಜಂಕ್ಷನ್ – ಆರ್ಟಿಒ ವೃತ್ತ
- ದಾಸಪ್ಪ ವೃತ್ತ – ಹಸು-ಕರು ವೃತ್ತ
- ಆಕಾಶವಾಣಿ ವೃತ್ತ – ಮಾಲ್ಗುಡಿ ಜಂಕ್ಷನ್
ಪ್ರಧಾನಿ ಕಾರ್ಯಕ್ರಮ ಮುಗಿದು ನಗರ ತೊರೆಯುವವರೆಗೆ ಈ ಮಾರ್ಗಗಳಲ್ಲಿ ಸಾರ್ವಜನಿಕ ಪ್ರವೇಶ ಇರುವುದಿಲ್ಲ.
ಪ್ರವಾಸದ ಸಂಪೂರ್ಣ ವೇಳಾಪಟ್ಟಿ
ಮಧ್ಯಾಹ್ನ 2:55ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, 3:15ಕ್ಕೆ ಹೆಲಿಕಾಪ್ಟರ್ ಮೂಲಕ ಓವಲ್ ಮೈದಾನ ತಲುಪಲಿದ್ದಾರೆ. ಬಳಿಕ 3:25ಕ್ಕೆ ರಾಮಕೃಷ್ಣ ಆಶ್ರಮಕ್ಕೆ ತೆರಳಿ ಕೆಲ ನಿಮಿಷ ಧ್ಯಾನ ನಡೆಸಲಿದ್ದಾರೆ. 3:30ರಿಂದ 5:15ರವರೆಗೆ ವಿವೇಕ ಸ್ಮಾರಕ ಸಂಬಂಧಿತ ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, 5:55ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ನವದೆಹಲಿಗೆ ತೆರಳಲಿದ್ದಾರೆ.



