ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಒಂದು ಕಾಲದಲ್ಲಿ ಗುರುಗಳ ಮಾತೇ ವಿದ್ಯಾರ್ಥಿಗಳಿಗೆ ದಾರಿದೀಪವಾಗಿತ್ತು. ಗುರು ತೋರಿದ ದಾರಿಯಲ್ಲಿ ನಡೆದು ಬದುಕು ಕಟ್ಟಿಕೊಳ್ಳುತ್ತಿದ್ದ ಶಿಷ್ಯರಿದ್ದರು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಹಾಗೂ ದೂರದರ್ಶನದ ಮೋಹ ವಿದ್ಯಾರ್ಥಿಗಳ ಅಮೂಲ್ಯ ಸಮಯವನ್ನು ಕಸಿದುಕೊಳ್ಳುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಆಕರ್ಷಣೆಯ ಜಗತ್ತಿನಿಂದ ದೂರವಿದ್ದು, ಪುಸ್ತಕ ಹಾಗೂ ವಿದ್ಯಾಭ್ಯಾಸದತ್ತ ಮನಸ್ಸು ಕೇಂದ್ರೀಕರಿಸಬೇಕು ಎಂದು ನಿವೃತ್ತ ಶಿಕ್ಷಕ ಬಸನಗೌಡ ಮಲ್ಲನಗೌಡ್ರ ಕರೆ ನೀಡಿದರು.
ಪಟ್ಟಣದ ಕೆಎಸ್ಎಸ್ ಪ್ರೌಢಶಾಲೆ ಹಾಗೂ ಕೆಎಸ್ಎಸ್ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗುರು ಎಂಬುದು ಕೇವಲ ಒಂದು ಹುದ್ದೆಯಲ್ಲ, ಅದು ಬದುಕನ್ನು ರೂಪಿಸುವ ಶಕ್ತಿ ಎಂದ ಅವರು, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗುರು–ಶಿಷ್ಯರ ಸಂಬಂಧ ತಾಯಿ–ಮಗುವಿನ ಬಾಂಧವ್ಯದಷ್ಟೇ ಆತ್ಮೀಯವಾಗಿರಬೇಕು. ಶಿಕ್ಷಕರು ಪಠ್ಯಪುಸ್ತಕದ ಜ್ಞಾನ ನೀಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಶಿಸ್ತು, ಸಂಸ್ಕಾರ ಹಾಗೂ ಉತ್ತಮ ಚಿಂತನೆಗಳನ್ನು ಬೆಳೆಸಬೇಕು ಎಂದರು.
ಇಂದಿನ ಮಕ್ಕಳು ಮೊಬೈಲ್, ದೂರದರ್ಶನ ಹಾಗೂ ವಿವಿಧ ಆಕರ್ಷಣೆಗಳಿಗೆ ಒಳಗಾಗುತ್ತಿರುವುದು ಆತಂಕದ ಸಂಗತಿ. ದುಶ್ಚಟಗಳಿಂದ ದೂರವಿದ್ದು, ಸಮಯದ ಮೌಲ್ಯ ಅರಿತು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ಇಂದು ಪುಸ್ತಕ ಹಿಡಿದ ಕೈಯೇ ನಾಳೆ ಸಮಾಜವನ್ನು ಮುನ್ನಡೆಸುವ ಕೈಯಾಗಬೇಕು. ಶಿಕ್ಷಕರ ಮಾರ್ಗದರ್ಶನವನ್ನು ಗೌರವದಿಂದ ಸ್ವೀಕರಿಸಿ, ಅವರ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ಬದುಕಿಗೆ ನಿಜವಾದ ಅರ್ಥ ದೊರೆಯುತ್ತದೆ ಎಂದು ಹೇಳಿದರು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕ ವೃತ್ತಿಯ ಘನತೆಯನ್ನು ವಿಶ್ವದ ಮಟ್ಟಿಗೆ ಎತ್ತಿಹಿಡಿದ ಮಹಾನ್ ಚಿಂತಕರಾಗಿದ್ದರು. ತತ್ವಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು, ತಮ್ಮ ಬದುಕಿನ ಮೂಲಕವೇ ಶಿಕ್ಷಕರು ಹೇಗಿರಬೇಕು ಹಾಗೂ ವಿದ್ಯಾರ್ಥಿಗಳು ಯಾವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟರು. ಅವರ ಆದರ್ಶಗಳು ಇಂದಿಗೂ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ದಾರಿತೋರಿಸುವ ಬೆಳಕಿನ ಕಿರಣಗಳಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶಿವಾನಂದ ಗೋಗೇರಿ ಮಾತನಾಡಿ, ಮಕ್ಕಳ ಭೌತಿಕ ಬೆಳವಣಿಗೆಯಷ್ಟೇ ಅವರ ಮಾನಸಿಕ ಹಾಗೂ ನೈತಿಕ ಬೆಳವಣಿಗೆಯೂ ಮುಖ್ಯವಾಗಿದೆ. ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವ ಸಾಧನವಲ್ಲ, ಅದು ಒಬ್ಬ ಉತ್ತಮ ಮನುಷ್ಯನನ್ನು ರೂಪಿಸುವ ಪ್ರಕ್ರಿಯೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ತತ್ವಶಾಸ್ತ್ರ ಅಡಿಗಲ್ಲಿನಂತಿದ್ದು, ಅದರ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಟ್ಟ ಮಹಾನ್ ಚಿಂತಕರಲ್ಲಿ ರಾಧಾಕೃಷ್ಣನ್ ಅವರು ಪ್ರಮುಖರು ಎಂದರು.
ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ಕತ್ತಲೆಗೆ ಬೆಳಕು ತೋರುವ ದೀಪಗಳಿದ್ದಂತೆ. ಅವರು ನೀಡುವ ಜ್ಞಾನ, ಸಂಸ್ಕಾರ ಹಾಗೂ ಮಾರ್ಗದರ್ಶನ ಜೀವನದುದ್ದಕ್ಕೂ ಶಿಷ್ಯನೊಂದಿಗೆ ಸಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಕರಿಂದ ಪಡೆದ ಜ್ಞಾನವನ್ನು ಪರೀಕ್ಷೆಯ ಅಂಕಗಳಿಗೆ ಮಾತ್ರ ಸೀಮಿತಗೊಳಿಸದೆ, ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಅಳವಡಿಸಿಕೊಂಡಾಗ ಶಿಕ್ಷಣದ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ.ಎನ್. ಹಿರೇಮಠ, ಎಂ.ವಿ. ವೆಂಕಟಾಪುರ, ಆರ್.ಟಿ. ಅಕ್ಕಸಾಲಿ, ಪಿ.ಬಿ. ಉಪ್ಪಿನ, ಎಸ್.ಎಂ. ಉಣಕಲ್, ಭೋವಿ ಸಮಾಜದ ಅಧ್ಯಕ್ಷ ಮಣ್ಣೂವಡ್ಡರ, ಎ.ಎಂ. ಹುಡೆದ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿ–ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಗುರು ಎಂಬುದು ಕೇವಲ ಒಂದು ಹುದ್ದೆಯಲ್ಲ; ಅದು ಬದುಕನ್ನು ರೂಪಿಸುವ ಶಕ್ತಿ. ಶಿಕ್ಷಕರು ಪಠ್ಯಪುಸ್ತಕದ ಜ್ಞಾನ ನೀಡುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಶಿಸ್ತು, ಸಂಸ್ಕಾರ ಹಾಗೂ ಉತ್



