ವಿಜಯಸಾಕ್ಷಿ ಸುದ್ದಿ, ಗದಗ: ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ನಂದೋತ್ಸವ ಕಾರ್ಯಕ್ರಮವನ್ನು ಸೆ. 6ರಂದು ನಗರದ ವೀರನಾರಾಯಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸತೀಶ್ ವಜ್ರೇಶ್ವರಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಬಸವೇಶ್ವರ ವೃತ್ತದಿಂದ ವೀರನಾರಾಯಣ ದೇವಸ್ಥಾನದವರೆಗೆ ಶ್ರೀಕೃಷ್ಣನ ಮೆರವಣಿಗೆ ನಡೆಯಲಿದೆ ಎಂದರು.
ಮಧ್ಯಾಹ್ನ 3.30ರಿಂದ ರಾತ್ರಿ 8.30ರವರೆಗೆ ವೀರನಾರಾಯಣ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕೀರ್ತನೆ, ಶ್ರೀಕೃಷ್ಣನಿಗೆ ಅಭಿಷೇಕ, ಪ್ರವಚನ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಇಸ್ಕಾನ್ನ ಸತ್ಯಮೂರ್ತಿ ಪ್ರಭು ಅವರು ಪ್ರವಚನ ನೀಡಲಿದ್ದಾರೆ. ಎಸ್ಎಸ್ಕೆ ಸಮಾಜದ ಅಧ್ಯಕ್ಷ ಫಕೀರಸಾ ಭಾಂಡಗೆ, ದತ್ತ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಕಿರಣ ಭೂಮಾ, ಎಸ್.ಎಚ್. ಶಿವನಗೌಡ್ರ, ಪ್ರಕಾಶ ಆರ್. ಬಾಕಳೆ ಹಾಗೂ ಕ್ಲರ್ಕ್ ಇನ್ನ ಯೋಗೇಶ ಎಸ್. ಸಾವಕಾರ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಕೇವಲ ಧಾರ್ಮಿಕ ಆಚರಣೆಯಲ್ಲ. ಧರ್ಮದ ಪುನರುತ್ಥಾನ ಹಾಗೂ ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸಾರುವ ಪವಿತ್ರ ದಿನವಾಗಿದೆ. ಶ್ರೀಕೃಷ್ಣನ ಸಂದೇಶ ಹಾಗೂ ಆದರ್ಶಗಳನ್ನು ಸ್ಮರಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದೊಂದಿಗೆ ಜನ್ಮಾಷ್ಟಮಿ ಆಚರಿಸಬೇಕು ಎಂದು ಸಂಘಟಕರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೃತ್ಯುಂಜಯ ನಿಲೂಗಲ್ಲ, ವಿಠ್ಠಲ ಬಾಕಳೆ, ಗೋವಿಂದರಾಜ ಶಿರಹಟ್ಟಿ, ಪ್ರಕಾಶ ಕಳಸಣ್ಣವರ, ಪ್ರವೀಣ ಖಟವಟೆ, ಬಸವರಾಜ ಶೆಟ್ಟರ್ ಹಾಗೂ ಗವಿಸಿದ್ದಯ್ಯ ಹಿರೇಮಠ ಉಪಸ್ಥಿತರಿದ್ದರು.



