ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: 12ನೇ ಶತಮಾನದ ಶಿವಶರಣರ ತತ್ವೋಪದೇಶಗಳು ಇಂದಿನ ಪೀಳಿಗೆಯ ಭವಿಷ್ಯ ರೂಪಿಸಲು ಸಹಕಾರಿಯಾಗಿದ್ದು, ಯುವಕರು ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠದ ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು.
ಲಕ್ಕುಂಡಿಯ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿರುವ ಶರಣರ ತತ್ವ ಚಿಂತನೆ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಮಾತನಾಡಿ, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ನಿರ್ಮಾಣವಾಗುವ ಹಲವು ಸಿನಿಮಾಗಳು ಕೆಲವೇ ದಿನಗಳಲ್ಲಿ ಜನರ ನೆನಪಿನಿಂದ ಮರೆಯಾಗುತ್ತವೆ. ಆದರೆ 12ನೇ ಶತಮಾನದ ಶರಣರ ಜೀವನ ಚರಿತ್ರೆ, ಅವರು ನಡೆದ ದಾರಿ, ಮಾರ್ಗದರ್ಶನ, ನಿಸ್ವಾರ್ಥ ಸೇವೆ ಹಾಗೂ ಪ್ರಾಮಾಣಿಕತೆಯ ಕಥೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ ಎಂದರು.
12ನೇ ಶತಮಾನದ ಶರಣರ ಜೀವನ ಚರಿತ್ರೆ, ಅವರು ನಡೆದು ಬಂದ ದಾರಿ, ಮಾರ್ಗದರ್ಶನ, ಅವರ ನಿಸ್ವಾರ್ಥ ಸೇವೆ ಹಾಗೂ ಪ್ರಾಮಾಣಿಕತೆಯ ಕಥೆಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಹೇಳಿದರು.
ನಿವೃತ್ತ ಯೋಧ ದತ್ತಾತ್ರೇಯ ಜೋಶಿ ಮಾತನಾಡಿ, ಸನಾತನ ಧರ್ಮದ ಪ್ರತಿಯೊಂದು ಧಾರ್ಮಿಕ ಆಚರಣೆಗೂ ವೈಜ್ಞಾನಿಕ ಹಿನ್ನೆಲೆ ಇದೆ. ಶ್ರಾವಣ ಮಾಸದ ಆಚರಣೆಗೂ ವಿಶೇಷ ಅರ್ಥವಿದ್ದು, ಶರಣರ ತತ್ವ ಚಿಂತನೆಯ ಪ್ರವಚನದ ಮೂಲಕ ಅದರ ಮಹತ್ವವನ್ನು ತಿಳಿದುಕೊಳ್ಳಬಹುದು ಎಂದರು.
ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ನಜೀರಅಹ್ಮದ್ ಕಿರಿಟಗೇರಿ ಮಾತನಾಡಿ, ಇಂದಿನ ಯುವಕರು ಧಾರ್ಮಿಕ ಕಾರ್ಯಕ್ರಮಗಳಿಂದ ವಿಮುಖರಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದರು.
ಗದಗದ ಡಾ. ಗಿರಿಜಾ ಹಸಬಿ ಅವರು ಪ್ರವಚನ ಆರಂಭಿಸಿದರು. ಷಡಕ್ಷರಯ್ಯ ಬದ್ನಿಮಠ ಹಾಗೂ ವೀರಣ್ಣ ಕರಿಯಲ್ಲಪ್ಪನವರ ಸಂಗೀತ ಸೇವೆ ಸಲ್ಲಿಸಿದರು.
ಶಂಕ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ಗ್ರಾ.ಪಂ. ಮಾಜಿ ಸದಸ್ಯ ಬಸವರಾಜ ಯಲಿಶಿರುಂದ, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ, ವೀರಯ್ಯ ಗಂಧದ, ನಿಂಗಪ್ಪ ಗುಂಜಳ, ಬಸಪ್ಪ ರೇವಡಿ, ಅಶೋಕ ಕಣವಿ, ಗಂಗಾಧರ ತಿಮ್ಮಾಪೂರ ಹಾಗೂ ಸೇವಾ ಸಮಿತಿ ಅಧ್ಯಕ್ಷ ಮುತ್ತಪ್ಪ ನೋಟಗಾರ ವೇದಿಕೆಯಲ್ಲಿದ್ದರು.
ಬಸವರಾಜ ಕಣವಿ ಸ್ವಾಗತಿಸಿದರು. ಅಮರೇಶ ಕರೆಕಲ್ಲ ನಿರೂಪಿಸಿದರು. ಶಿವಯೋಗಿ ಡಿಗ್ಗಾವಿ ವಂದಿಸಿದರು.
“ಶರಣರು ತಾವು ನುಡಿದಂತೆ ನಡೆದು ಈ ಸಮಾಜಕ್ಕೆ ಇಂದಿಗೂ ಮಾದರಿಯಾಗಿದ್ದಾರೆ. ಅವರ ತತ್ವ, ನೀತಿ ಹಾಗೂ ಸಂಸ್ಕಾರಗಳು ಯುವಕರಿಗೆ ಸ್ಪೂರ್ತಿದಾಯಕವಾಗಿವೆ. ಶ್ರಾವಣ ಮಾಸದಲ್ಲಿ ಶರಣರ ತತ್ವ ಚಿಂತನೆ ಹಾಗೂ ಉಪದೇಶಗಳನ್ನು ಶ್ರವಣ ಮಾಡಬೇಕು.”
— ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು



