ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಶಾಸಕ ಎಚ್.ಕೆ. ಪಾಟೀಲ ಅವರ ಜನ್ಮದಿನಾಚರಣೆಯನ್ನು ಆತ್ಮೀಯವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪರಮಾತ್ಮನ ಆಶೀರ್ವಾದ ಪಡೆದು ಮಾತನಾಡಿದ ಶಾಸಕ ಎಚ್.ಕೆ. ಪಾಟೀಲ ಅವರು, ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ ದೊರೆತ ಆತ್ಮೀಯತೆಯನ್ನು ಸ್ಮರಿಸಿದರು.
ರಾಜಕಾರಣಿ ಹಾಗೂ ಸಚಿವನಾದ ಬಳಿಕ ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರು ಹಾಗೂ ಪ್ರಖ್ಯಾತ ವಕೀಲರ ಸಭೆ-ಸಮಾರಂಭಗಳಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಧೈರ್ಯವಾಗಿ ಮಾತನಾಡಿದ್ದೇನೆ. ಆದರೆ, ಇಂದು ಈ ಆಧ್ಯಾತ್ಮಿಕ ಸಭೆಯಲ್ಲಿ ಮಾತನಾಡಲು ನನಗೆ ಪದಗಳೇ ಸಿಗುತ್ತಿಲ್ಲ. ಇಲ್ಲಿ ತೋರಿದ ಪ್ರೀತಿ-ಮಮತೆ ನನ್ನ ತಾಯಿಯ ಪ್ರೀತಿಯನ್ನು ನೆನಪಿಸಿದೆ ಎಂದರು.
ದೀಪ ಬೆಳಗಿಸಿ, ಕೇಕ್ ಕತ್ತರಿಸಿ ತಮ್ಮ ಜನ್ಮದಿನ ಆಚರಿಸಿದ ರೀತಿಯು ತಾಯಿಯ ಪ್ರೀತಿಯನ್ನು ನೆನಪಿಸಿತು. ತಮ್ಮ ತಾಯಿ ಮಾಡುತ್ತಿದ್ದ ಆಚರಣೆಗಳನ್ನು ಇಲ್ಲಿನ ಸಹೋದರಿಯರು ಮುಂದುವರಿಸಿಕೊಂಡು ಹೋಗುತ್ತಿರುವಂತೆ ಭಾಸವಾಯಿತು. ಪ್ರತಿವರ್ಷವೂ ಈ ಪವಿತ್ರ ಸ್ಥಳಕ್ಕೆ ಆಗಮಿಸಿ ಎಲ್ಲರ ಆಶೀರ್ವಾದ ಪಡೆಯಲು ಬಯಸುವುದಾಗಿ ಅವರು ಹೇಳಿದರು.
ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ. ಜಯಂತಿ ಅಕ್ಕ ಅವರು ಸ್ವಾಗತಿಸಿ ಅಭಿನಂದಿಸಿದರು. ಸ್ವಾತಂತ್ರ್ಯ ದಿನದ ಅಂಗವಾಗಿ ಆಂತರಿಕ ಸ್ವಾತಂತ್ರ್ಯದ ಮಹತ್ವದ ಕುರಿತು ಸಂದೇಶ ನೀಡಿದರು.
ನಂತರ ನೆರೆದಿದ್ದವರಿಗೆ ರಾಜಯೋಗ ಧ್ಯಾನದ ಅಭ್ಯಾಸ ಮಾಡಿಸಿ, ವ್ಯಸನಮುಕ್ತ ಜೀವನ ನಡೆಸುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಡಾ. ಶ್ರೀಮತಿ ವಿದ್ಯಾ, ಡಾ. ವೇಮನ್ ಸಾವಕಾರ್, ಜಿಲ್ಲಾಸ್ಪತ್ರೆಯ ಡಾ. ಗಿರೀಶ್ ನಾಗರಾಳ, ಆಂಜನೇಯ ಕಟಗಿ, ವರದರಾಜ್ ಹೆಬ್ಸೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಿ.ಕೆ. ರೇಖಾ ವಂದಿಸಿದರು.



