ಕರ್ನಾಟಕ ಬಂದ್ : ಕೊಪ್ಪಳ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

0
Spread the love

ಹೋರಾಟಗಾರರ ಬಂಧನ-ಬಿಡುಗಡೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕರ್ನಾಟಕ ಬಂದ್ ಕರೆ ಹಿನ್ನೆಲೆ ಕೊಪ್ಪಳದಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇಂದು ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಕೊಪ್ಪಳದ ಕೇಂದ್ರಿಯ ಬಸ್ ನಿಲ್ದಾಣದ ಮುಂದೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ತಡೆದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಲಾರಿ ಸಂಚಾರ ತಡೆಹಿಡಿದರು. ಬಸ್‌ನ ಮುಂದೆ ಅಡ್ಡ ಮಲಗಿ ಪ್ರತಿಭಟಿಸಿದರು. ರಾಜ್ಯ ಸರ್ಕಾರ ಮತ್ತು ಶಾಸಕ ಬಸವರಾಜ ಪಾಟೀಲ್ ಯತ್ನಾಳ ವಿರುದ್ಧ ಘೋಷಣೆ ಕೂಗಿದರು.

ಇದೇ ಸಂದರ್ಭದಲ್ಲಿ ಶಾಸಕ ಯತ್ನಾಳ ಅಣಕು ಶವ ಯಾತ್ರೆ ನಡೆಸಿದರು. ಶಾಸಕ ಯತ್ನಾಳ ಶವ ಇಟ್ಟು ಕಾರ್ಯಕರ್ತರು ಆಡಿಕೊಂಡು ಅತ್ತರು. ಗ್ರಾಮೀಣ ಪ್ರದೇಶದಲ್ಲಿ ಮೃತಪಟ್ಟಾಗ ಅಳುವುದನ್ನು ಮಿಮಿಕ್ರಿ ಮಾಡಿದ ಕಾರ್ಯಕರ್ತರು ನಂತರ ಅಶೋಕ ಸರ್ಕಲ್ ನಲ್ಲಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮರಾಠಾ ಪ್ರಾಧಿಕಾರ ರದ್ದು ಮಾಡಲು ಆಗ್ರಹಿಸಿದರಲ್ಲದೇ ಯತ್ನಾಳ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು ಗೂಂಡಾ ಸರಕಾರಕ್ಕೆ ದಿಕ್ಕಾರ ಎಂದು ಘೋಷಣೆ ಕೂಗಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲು ಹೊರಟಿದ್ದ ಹೋರಾಟಗಾರರನ್ನು ಬಸವೇಶ್ವರ ಸರ್ಕಲ್ ನಲ್ಲಿ ಪೋಲಿಸರು ಬಂಧಿಸಿ ಕರೆದೊಯ್ದರು.

ಈ ಸಂದರ್ಭದಲ್ಲಿ ರೈತ ಸಂಘಟನೆ ಮತ್ತು ಕೂಲಿ ಕಾರ್ಮಿಕ ಸಂಘಟನೆಯವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬೆಳಗಿನ ಜಾವದಿಂದಲೇ ಕೊಪ್ಪಳದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕ್ರಮೇಣ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಜನಸಂಚಾರ ಎಂದಿನಂತೆ ಇತ್ತು. ಜನರೂ ಸಹ ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಕಂಡು ಬಂತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಕೆ.ಎಸ್.ಕೊಡತಗೇರಿ, , ಆರ್.ವಿಜಯಕುಮಾರ್, ವಿರೂಪಾಕ್ಷಗೌಡ, ಅರ್ಜುನ ನಾಯಕ್, ರಾಜಶೇಖರ ರೆಡ್ಡಿ, ಚನ್ನಬಸವ ಜೇಕಿನ್, ರಮೇಶ ಕೋಟಿ, ರೈತ ಸಂಘಟನೆಯ ಶರಣಪ್ಪ ಕೊತ್ವಾಲ, ನಾಸೀರ್ ಕಂಠಿ, ಹನುಮಂತ ಹಳ್ಳಿಕೇರಿ ಮತ್ತಿತರರು ಇದ್ದರು.


Spread the love

LEAVE A REPLY

Please enter your comment!
Please enter your name here