-ಕೆಆರ್ ಎಸ್ ಕಾರ್ಯಕರ್ತರು-ಪೊಲೀಸರ ನಡುವೆ ವಾಗ್ವಾದ

0
Spread the love

ಬಿಕ್ಕಟ್ಟು ತಂದಿಟ್ಟ ಹಲ್ಕಟ್ ಪದಪ್ರಯೋಗ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಸೈಕಲ್ ಜಾಥಾ ಮತ್ತು ಸಾರ್ವಜನಿಕ ಭಾಷಣದ ಪರವಾನಗಿಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಪಿಎಸ್ಐ ಮಹಾಂತೇಶ ಮೇಟಿ ಬಳಸಿದ ಹಲ್ಕಟ್ ಎಂದ ಪದಪ್ರಯೋಗ ಕೆಆರ್ಎಸ್ ಕಾರ್ಯಕರ್ತರನ್ನು ಕೆರಳಿಸಿತು.

ನಗರದ ಅಶೋಕ ವೃತ್ತದಲ್ಲಿ ಗುರುವಾರ ವಾಗ್ವಾದದ ಘಟನೆ ನಡೆದಿದ್ದು, ಕೆಲ ಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣರಡ್ಡಿ ಪೊಲೀಸರಿಗೆ ಪರವಾನಗಿ ಮಾಹಿತಿ ನೀಡಿದ ಬಳಿಕ ಸೈಕಲ್ ಜಾಥಾ ಮುಂದುವರಿಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕೃಷ್ಣರಡ್ಡಿ, ಪೊಲೀಸ್ ಭಾಷೆ ಎಲ್ಲ ಸಂದರ್ಭದಲ್ಲೂ ಒಂದೇ ಇರಬಾರದು. ಭಾಷಾ ಬಳಕೆ, ಪದ ಪ್ರಯೋಗ ನಮಗೂ ಚನ್ನಾಗಿ ಗೊತ್ತಿದೆ. ಜೈಲು ನಮಗೇನು ಹೊಸತಲ್ಲ. ಆದರೂ ಹಲ್ಕಟ್ ಪದ ಬಳಕೆ ಸರಿಯಾದುದಲ್ಲ. ಇದನ್ನೇ ಬೆಳೆಸುವ ಇಚ್ಛೆ ನಮಗಿಲ್ಲ ಎಂದರು.

ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ಬಿ.ಸಿ.ಪಾಟೀಲ್ ಅವರ ದುರಹಂಕಾರದ ಮಾತು, ಸಂವೇದನೆ ಇಲ್ಲದ ಮಾತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಹ ಆತ್ಮಹತ್ಯೆಗೆ ಯತ್ನಿಸಿದ್ದರು. ಹಾಗಾದರೆ ಅವರು ಹೇಡಿನಾ? ಅಥವಾ ಅಂಥವರನ್ನು ನೇಮಿಸಿಕೊಂಡ ಮುಖ್ಯಮಂತ್ರಿಯ ಯೋಗ್ಯತೆ ಏನು? ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರಡ್ಡಿ ಪ್ರಶ್ನಿಸಿದರು.

ರೈತರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ ವಿರುದ್ಧ ಕಿಡಿ ಕಾರಿದ ಅವರು, ರೈತರ ಆತ್ಮಗೌರವಕ್ಕೆ ಧಕ್ಕೆ ತರುವಂಥ ಮಾತುಗಳು ಸರಿಯಲ್ಲ. ರೈತರು ಯಾವ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂಬುದು ಶ್ರೀಮಂತ ಕುಟುಂಬದ ದರ್ಪಿಷ್ಟ ಸಚಿವರಿಗೆ ಏನು ಗೊತ್ತು? ಇಂಥವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಸಿಎಂ ಯಡಿಯೂರಪ್ಪ ಬಿ.ಸಿ.ಪಾಟೀಲ್ ರಿಂದ ಕೃಷಿ ಖಾತೆ ಹಿಂಪಡೆಯಬೇಕು. ಬೇರೆ ಖಾತೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ವಿರೋಧಿಸಿ ನಮ್ಮ ಕೆಆರ್ಎಸ್ ಪಕ್ಷ ಸೈಕಲ್ ಯಾತ್ರೆ ನಡೆಸುತ್ತಿದ್ದು, ಎರಡನೇ ಹಂತದಲ್ಲಿ ಬೆಳಗಾವಿಯಿಂದ ಆರಂಭಗೊಂಡು ಬಳ್ಳಾರಿವರೆಗೆ ಸೈಕಲ್ ಯಾತ್ರೆ ನಡೆಯಲಿದೆ. ಕನ್ನಡಪರ ಸಂಘಟನೆಗಳ ಕರ್ನಾಟಕ ಬಂದ್ಗೆ ಪಕ್ಷವು ಬೆಂಬಲ ನೀಡಲ್ಲ. ಹೋರಾಟದ ಹಾದಿ ಸರಿಯಿದ್ದು, ಸರಕಾರ ಜಾತಿಗಳ ಓಲೈಕೆಗೆ ನಿಗಮ, ಮಂಡಳಿ, ಅಭಿವೃದ್ಧಿ ಪ್ರಾಧಿಕಾರದ ಗಿಮಿಕ್ ಬಿಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.


Spread the love

LEAVE A REPLY

Please enter your comment!
Please enter your name here