ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಮಂಗಳವಾರ ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ, ಕೊವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗುತ್ತಿರುವ ಜ್ವಲಂತ ಸಮಸ್ಯೆಯನ್ನು ಗದಗ ಶಾಸಕ ಎಚ್.ಕೆ. ಪಾಟೀಲರು ಪ್ರಸ್ತಾಪಿಸಿದ್ದರು. ಪಕ್ಕದ ರಾಜ್ಯಗಳಿಗೆ ಆಕ್ಸಿಜನ್ ಕಳಿಸುವ ಸರ್ಕಾರ, ಇಲ್ಲೇ ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವ ಕೊವಿಡ್ ರೋಗಿಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕಿಡಿ ಕಾರಿದ್ದರು.
ಕೊವಿಡ್ ತೀವ್ರವಾಗಿರುವ ಐದಾರು ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆಯಿದೆ. ಉತ್ಪಾದನೆ, ಪೂರೈಕೆ ಮತ್ತು ವಿತರಣೆಯಲ್ಲಿ ಸಾಕಷ್ಟು ದೋಷಗಳಿವೆ.
ಮಂಗಳವಾರ ಕೇಂದ್ರ ಆರೋಗ್ಯ ಇಲಾಖೆ ಆಕ್ಸಿಜನ್ ಕೊರತೆಯಿಲ್ಲ, ಬದಲಿಗೆ ಅದನ್ನು ಬಳಸುವ ನಿರ್ವಹಣೆಯಲ್ಲಿ ಆಸ್ಪತ್ರೆಗಳು ತಪ್ಪು ಮಾಡುತ್ತಿವೆ, ಇದರಿಂದ ಆಕ್ಸಿಜನ್ ಕೊರತೆಯಾಗುತ್ತಿದೆ ಎಂದು ಹೇಳಿದೆ.

ಕಳೆದ 45 ದಿನದಲ್ಲಿ ಆಕ್ಸಿಜನ್ ಅಗತ್ಯವಿರುವ ಕೊವಿಡ್ ರೋಗಿಗಳ ಸಂಖ್ಯೆ ಶೇ. 1ರಷ್ಟು ಏರಿಕೆಯಾಗಿದೆ. 45 ದಿನದ ಹಿಂದೆ ಆಕ್ಸಿಜನ್ ಅಗತ್ಯವಿರುವ ಸಕ್ರಿಯ ರೋಗಿಗಳ ಸಂಖ್ಯೆ ಶೇ. 5.6 ಇತ್ತು. ಈಗ ಅದು ಶೇ. 6.5ಗೆ ಏರಿದೆ.
ಒಂದು ಪರ್ಸೆಂಟ್ ಏರಿಕೆ ಸಣ್ಣದು ಎನಿಸಿದರೂ, ದೈನಂದಿನ ಕೇಸುಗಳ ಸಂಖ್ಯೆ ನೋಡಿದರೆ ಇದು ಗಣನೀಯ ಏರಿಕೆಯೇ. ಇಷ್ಟಾದರೂ ಈಗ ಉತ್ಪಾನೆಯಾಗುತ್ತಿರುವ ಆಕ್ಸಿಜನ್ನಲ್ಲೇ ನಿರ್ವಹಣೆ ಮಾಡಲು ಸಾಧ್ಯ ಎಂಬುದು ಕೇಂದ್ರದ ವಾದ.
ಕೇಂದ್ರ ಸರ್ಕಾರದ ಪ್ರಕಾರ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ಪತ್ರೆಗಳು ಆಕ್ಸಿಜನ್ ಬಳಸುತ್ತಿವೆ. ಸೌಮ್ಯ ಲಕ್ಷಣಗಳಿರುವ ಕೊವಿಡ್ ರೋಗಿಗಳಲ್ಲಿ ಎಷ್ಟು ಜನರಿಗೆ ಆಕ್ಸಿಜನ್ ಅಗತ್ಯ ಎಂಬುದರ ಅಂದಾಜನ್ನು ಮೊದಲೇ ಮಾಡಿಕೊಳ್ಳುತ್ತಿಲ್ಲ. ರೋಗಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲೂ ಆಕ್ಸಿಜನ್ ಪೂರೈಸಿದ ವರದಿಗಳಿವೆ.
ಕೆಲವು ದೊಡ್ಡ ಆಸ್ಪತ್ರೆಗಳು ನೇರವಾಗಿ ಉತ್ಪಾದಕರಿಂದ ಆಕ್ಸಿಜನ್ ಸಿಲಿಂಡರ್ ಪಡೆದರೆ, ಉಳಿದ ಆಸ್ಪತ್ರೆಗಳು ಬಾಟ್ಲರ್ಗಳ ಮೂಲಕ ಪಡೆಯುತ್ತವೆ. ಈ ಬಾಟ್ಲರ್ಗಳು ಉತ್ಪಾದಕರಿಂದ ಪಡೆದು, ಅದನ್ನು ಸಿಲಿಂಡರ್ಗೆ ತುಂಬಿ ಪೂರೈಸುತ್ತಾರೆ. ಇಲ್ಲಿಯೂ ವಿಳಂಬವಾಗುತ್ತಿದೆ.
ಇವೆಲ್ಲ ಕಾರಣಗಳು ಸರಿ. ಆದರೆ ಈಗ ಆಗಬೇಕಾದ ತುರ್ತು ಕೆಲಸ ಆಕ್ಸಿಜನ್ ಕೊರತೆಯ ಕಾರಣಕ್ಕೇ ಸಾವು ಸಂಭವಿಸದಂತೆ ತಡೆಯುವುದೇ ಆಗಿದೆ. ಸಾಕಷ್ಟು ಉತ್ಪಾದನೆಯಿದ್ದೂ, ಅದರ ಸಮರ್ಪಕ ಉಪಯೋಗ ಮಾಡದಿದ್ದರೆ ಈ ಆಡಳಿತ ವ್ಯವಸ್ಥೆ ಇದ್ದೂ ಏನು ಉಪಯೋಗ?