ಜನನ-ಮರಣ ಪ್ರಮಾಣ ಪತ್ರದಲ್ಲಿ ಸರಿಯಾದ ಮಾಹಿತಿ ನಮೂದಿಸಿ: ಸಿದ್ರಾಮೇಶ್ವರ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಜನನ ಮತ್ತು ಮರಣ ಪ್ರಮಾಣ ಪತ್ರದಲ್ಲಿ ಹೆಸರು, ಲಿಂಗ, ದಿನಾಂಕ, ಸ್ಥಳ ತಪ್ಪಾಗಿ ನಮೂದಾಗದಂತೆ ಎಚ್ಚರ ವಹಿಸಿ ಸರಿಯಾದ ಮಾಹಿತಿಯನ್ನು ನಮೂದಿಸಿ, ಕಾನೂನು ರೀತಿಯಲ್ಲಿ ಪ್ರಮಾಣ ಪತ್ರ ನೀಡಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ ಹೇಳಿದರು.
ಶನಿವಾರ  ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ನಾಗರಿಕ ನೋಂದಣಿ ಪದ್ಧತಿ ನಿಯಮಗಳು ಹಾಗೂ ಇ-ಜನ್ಮ ತಂತ್ರಾಂಶದ ನಿರ್ವಹಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿರುವಾಗ ಪ್ರತಿಯೊಬ್ಬ ವ್ಯಕ್ತಿಗೆ ಜನನ ಪ್ರಮಾಣ ಪತ್ರ ಮತ್ತು ಮರಣ ಹೊಂದಿದ ಅನಂತರ ಕುಟುಂಬದವರಿಗೆ ಮರಣ ಪ್ರಮಾಣಪತ್ರ ಉಪಯುಕ್ತವಾದ ದಾಖಲೆಗಳಾಗಿದ್ದು, ಈ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ವ್ಯಕ್ತಿಯ ನಿಖರ ಮಾಹಿತಿಯನ್ನು ಸಂಬಂಧಪಟ್ಟವರಿಂದ ಪಡೆದು ಪರಿಶೀಲಿಸಿ, ನಮೂನೆಯಲ್ಲಿ ಭರ್ತಿ ಮಾಡಿ ಆನ್‌ಲೈನ್‌ನಲ್ಲಿ ದಾಖಲಿಸಿ, ನಮೂನೆ ಅಂಗೀಕಾರಗೊಂಡ ಅನಂತರ ಪ್ರಮಾಣ ಪತ್ರ ನೀಡಬೇಕು ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರಿಗೆ ಜನನ ಮತ್ತು ಮರಣ ಪ್ರಮಾಣ ಪತ್ರದ ಅಗತ್ಯದ ಬಗ್ಗೆ ಅರಿವು ಮೂಡಿಸಬೇಕು. ಆರೋಗ್ಯ ಕಾರ್ಡ್ ಮತ್ತು ತಾಯಿ ಕಾರ್ಡ್‌ನಲ್ಲಿ ಸಂಭಾವ್ಯ ಹೆರಿಗೆ ವಾರಗಳನ್ನು ನೀಡಲಾಗಿದ್ದು, ಇದು ಉಪಯುಕ್ತ ದಾಖಲಾತಿಯಾಗಿದೆ. ಹೆರಿಗೆಯ ಬಳಿಕ ಮಗುವಿನ ಜನನ ನೋಂದಣಿಯನ್ನು ಕಡ್ಡಾಯವಾಗಿ ಕನ್ನಡದಲ್ಲಿ ಮಾಡಬೇಕು. ಇದರ ಪ್ರತಿಯೊಂದು ಮಾಹಿತಿ ನೀಡುವ ಮಾಹಿತಿದಾರರ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕು. ನಿರ್ಜೀವ ಜನನವಾದಲ್ಲಿ ನಮೂನೆ-4ರಲ್ಲಿ ಭರ್ತಿ ಮಾಡಿ, ಆನ್‌ಲೈನ್‌ನಲ್ಲಿ ನಮೂದಿಸಬೇಕು ಎಂದು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಕುಗಿ ತಾಲ್ಲೂಕು ವೈದ್ಯಾಧಿಕಾರಿ ಶರಣಬಸಪ್ಪ, ಕುಷ್ಟಗಿ, ಯಲಬುರ್ಗಾ ತಾಲ್ಲೂಕಿನ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿ, ಪಟ್ಟಣ ಪಂಚಾಯತ್, ಪುರಸಭೆ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here