ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಯಣ್ಣ ಮೂರ್ತಿ ತೆರವುಗೊಳಿಸಿದ ಘಟನೆಯ ಕುರಿತ ಅಸಲಿಯತ್ತು ಈಗ ಹೊರಬಂದಿದೆ. 2019 ಜನವರಿ 17 ರಂದು ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗಾಗಿ ಬಳಗಾನೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್ಗೆ ಗ್ರಾಮಪಂಚಾಯತಿಯವರು ಮೂರ್ತಿ ಪ್ರತಿಷ್ಠಾಪನೆಗಾಗಿ 500 ರೂಪಾಯಿಗಳ ಪಾವತಿಯನ್ನೂ ಪಡೆದಿದ್ದಾರೆ.
ಅದಕ್ಕೂ ಒಂದು ದಿನ ಹಿಂದೆ ಅಂದರೆ 2019 ರ ಜನವರಿ 16 ರಂದು ಮೂರ್ತಿ ಸ್ಥಾಪನೆಗೆ ಪರವಾನಿಗೆ ಪತ್ರವನ್ನೂ ಸಹ ಗ್ರಾಮಪಂಚಾಯತಿಯ ಕಡೆಯಿಂದ ಸದರಿ ಟ್ರಸ್ಟ್ಗೆ ನೀಡಲಾಗಿದೆ. ಅದರಂತೆ ನಿನ್ನೆ ರಾತ್ರಿ ಟ್ರಸ್ಟ್ನ ವತಿಯಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಆದರೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಗ್ರಾಮಕ್ಕೆ ಬಂದು ಹಾಲುಮತ ಸಮಾಜದವರನ್ನು ಮೂರ್ತಿ ಕುರಿತು ಮಾತನಾಡುವುದಾಗಿ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿಸಿ ಮತ್ತೊಂದೆಡೆ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಬೇರೆಡೆ ಸ್ಥಳಾಂತರ ಮಾಡಿದ್ದಾರೆ ಎಂದು ಸಮಾಜದ ರವಿ ಆರೋಪ ಮಾಡಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಸಭೆ ಸೇರಿದ್ದ ಜನರೆಲ್ಲರೂ ಮೂರ್ತಿಯ ಕಡೆ ಹೋದಾಗ ಅವರನ್ನು ಬ್ಯಾರಿಕೇಡ್ ಹಾಕಿ ತಡೆಯುವುದಲ್ಲದೇ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ ಎನ್ನಲಾಗಿದ್ದು, ಘಟನೆ ಸಂಬಂಧ ಹತ್ತು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಟ್ರಸ್ಟ್ಗೆ ನೀಡಿರುವ ಪರವಾನಿಗೆಯಂತೆ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಯಾಗಬೇಕು, ವಶಕ್ಕೆ ಪಡೆದವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆನ್ನುವುದು ಹಾಲುಮತ ಸಮಾಜದವರ ಆಗ್ರಹವಾಗಿದೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.