ವಿಜಯಸಾಕ್ಷಿ ಸುದ್ದಿ ಕೊಪ್ಪಳ:
ಭೂ ಒಡೆತನ ಯೋಜನೆಯಡಿ ಖಾಸಗಿ ಜಮೀನು ಖರೀದಿಸಿದಾಗ ಜಮೀನಿನ ಮಣ್ಣಿನ ವಿಧ, ನೀರಿನ ಲಭ್ಯತೆ ಇತ್ಯಾದಿಗಳ ಬಗ್ಗೆ ಕಂದಾಯ ಇಲಾಖೆಯವರೊಂದಿಗೆ ಜಂಟಿ ಪರಿಶೀಲಿಸಿ, ಭೂ ಮಾಲೀಕರಿಂದ ಭೂಮಿ ಖರೀದಿಸಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ದೌರ್ಜನ್ಯ ತಡೆ ಹಾಗೂ ನಿಯಂತ್ರಣ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಅಭಿವೃದ್ಧಿ ನಿಗಮಗಳಿಂದ ಭೂ ಒಡೆತನ ಯೋಜನೆಯಡಿ ಹಂಚಿಕೆಯಾದ ಜಮೀನುಗಳನ್ನು ಫಲಾನುಭವಿಗಳು ಪರಭಾರೆ ಮಾಡಿದ್ದಲ್ಲಿ ಅವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಿ. ದೌರ್ಜನ್ಯ ಪ್ರಕರಣಗಳಲ್ಲಿ ಅಪರಾಧ ನಿರ್ಣಯ ಪ್ರಮಾಣ ಅತ್ಯಂತ ಕಡಿಮೆಯಿದ್ದು, ಕಳೆದ 3 ವರ್ಷಗಳ ದೌರ್ಜನ್ಯ ಪ್ರಕರಣದ ಅಪರಾಧ ನಿರ್ಣಯ ಮತ್ತು ಖುಲಾಸೆಗೆ ಸಂಬಂಧಿಸಿದಂತೆ ಅಂಕಿ ಅಂಶಗಳ ವಿಶ್ಲೇಷನಾತ್ಮಕ ವರದಿ ಸಿದ್ದಪಡಿಸಿ ಸಲ್ಲಿಸುವಂತೆ ಅವರು ತಿಳಿಸಿದರು.
ತಪ್ಪು ಮಾಹಿತಿ ನೀಡಿ ಪಡೆದ ಸುಳ್ಳು ಜಾತಿ ಪ್ರಮಾಣ ಪತ್ರಗಳ ಆಧಾರದ ಮೇಲೆ ವಿತರಿಸಿದ ಸರ್ಕಾರದ ಸಹಾಯಧನ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಸ್ಥಿರ/ಚರ ಆಸ್ತಿಗಳನ್ನು ಜಪ್ತಿ ಮಾಡಿ ಹಣವನ್ನು ಸರ್ಕಾರಕ್ಕೆ ಭರಣ ಮಾಡಲು ಕ್ರಮ ಕೈಗೊಳ್ಳಿ. ಭವನ, ಕಾಲೋನಿ ಕಾಮಗಾರಿಗಳನ್ನು ನಿಗಧಿತ ಕಾಲಮಿತಿಯಲ್ಲಿ ಮುಕ್ತಾಯಗೊಳಿಸಿ ಎಂದು ಅವರು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಟಿ.ಶ್ರೀಧರ ಮಾತನಾಡಿ, ಒಟ್ಟು 26 ಪ್ರಕರಣಗಳಿಗೆ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, 3 ಪ್ರಕರಣಗಳು ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಯ ಬಾಕಿ ಪ್ರಕರಣಗಳು, 1 ಬಿ ಫಾಲ್ಸ್ ಹಾಗೂ 3 ಇತರೆ ಪ್ರಕರಣಗಳಾಗಿವೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನವೀನ್ ಶಿಂತ್ರೆ ಮಾತನಾಡಿ, 2020 ರ ಕ್ಯಾಲೆಂಡರ್ ವರ್ಷದಲ್ಲಿ ನವ್ಹಂಬರ್ ಅಂತ್ಯದವರೆಗೆ ದಾಖಲಾಗಿರುವ 34 ಪ್ರಕರಣಗಳಲ್ಲಿ 23 ಪ್ರಕರಣಗಳಿಗೆ ರೂ.33 ಲಕ್ಷ ಪರಿಹಾರ ಮಂಜೂರಿಸಿದ್ದು, ಬಾಕಿ ಪ್ರಕರಣಗಳಿಗೆ ಅನುದಾನ ಕೊರತೆಯ ಕಾರಣ ಪರಿಹಾರ ಪಾವತಿ ಮಾಡಲಾಗಿಲ್ಲ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಸಿಇಒ ರಘುನಂದನ್ ಮೂರ್ತಿ, ಸಹಾಯಕ ಆಯುಕ್ತರಾದ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.