ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೂವು ಹಣ್ಣು ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಜನಜಾತ್ರೆಯೇ ನೆರೆದಿತ್ತು.
ಗದಗ ನಗರದ ತರಕಾರಿ ಮಾರ್ಕೆಟ್, ಗ್ರೇನ್ ಮಾರ್ಕೆಟ್, ಬಟ್ಟೆ ಹಾಗೂ ಹೂವಿನ ಮಾರ್ಕೆಟ್ ಜನಜಂಗುಳಿಯಿಂದ ಕೂಡಿತ್ತು. ಪೂಜಾ ಸಾಮಗ್ರಿ, ಹೂವು, ಹಣ್ಣು, ಕಿರಾಣಿ ಸಾಮಗ್ರಿಗಳ ಖರೀದಿಗೆ ಜನರು ಮನೆಯಿಂದ ಮಾರ್ಕೆಟ್ ಗೆ ಮುಗಿಬಿದ್ದಿದ್ದಾರೆ.

ಇನ್ನು ಹಬ್ಬದ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ಬೆಲೆ ದುಬಾರಿಯಾಗಿತ್ತು. ಸೇಬು 100 ರೂ. ಇದ್ದಿದ್ದು ಇಂದು 200 ರೂ.ಗೆ ತಲುಪಿತ್ತು. ಹೂವು ಮತ್ತು ಪೂಜಾ ಸಾಮಗ್ರಿಗಳೂ ಇಂದು ದುಬಾರಿಯಾಗಿದ್ವು.
ದುಬಾರಿಯಾದರೂ ಹಬ್ಬ ಆಚರಿಸುವ ತವಕದಲ್ಲಿ ಜನ ಸಾಮಗ್ರಿಗಳನ್ನು ಕೊಳ್ಳಲು ಮುಗಿಬಿದ್ದಿದ್ದರು. ಆದರೆ ಕೊರೊನಾ ಮುಂಜಾಗ್ರತಾ ಕ್ರಮಗಳ ನಿಯಮಗಳನ್ನು ಯಾರು ಅನುಸರಿಸಲಿಲ್ಲಾ ಅನ್ನೋದು ವಿಪರ್ಯಾಸ.