ಮಾನವ ಜನ್ಮ ಪುಣ್ಯದಿಂದ ಬಂದದ್ದು, ಸಾರ್ಥಕವಾಗಿಸಿ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ
ಪುಣ್ಯದಿಂದ ಬಂದ ಮಾನವ ಜನ್ಮ ಸಾರ್ಥಕವಾಗಲು ಪರಂಪರೆ, ಸಂಸ್ಕಾರ ಹಾಗೂ ಧರ್ಮದ ಪುನರುತ್ಥಾನಕ್ಕೆ ಸಮರ್ಪಿಸಿಕೊಳ್ಳಬೇಕಿದೆ ಎಂದು ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಹೇಳಿದರು.
ಸಮೀಪದ ಸೂಡಿ ಗ್ರಾಮದ ಜುಕ್ತಿಹಿರೇಮಠದ ಲಿಂ.ಗುರು ಉಮಾಪತಿ ಶಿವಾಚಾರ್ಯರ 73ನೇ ಪುಣ್ಯಾರಾಧನೆ ಹಾಗೂ ೪೪ ನೇ ಸರಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊರೋನಾ ವೈರಸ್ ಜಗತ್ತಿನಾದ್ಯಂತ ಹಬ್ಬಿ ಮನುಷ್ಯರು ಮನೆ ಬಿಟ್ಟು ಬಾರದ ದುಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಹಬ್ಬಗಳು, ಜಾತ್ರೆಗಳು ಸಂಕ್ಷಿಪ್ತವಾಗಿ ಆಚರಣೆಯಾಗಿರುವುದು ನೋವಿನ ಸಂಗತಿ. ಬರಗಾಲ ಹಾಗೂ ಅತಿವೃಷ್ಠಿಯ ಸಂದರ್ಭದಲ್ಲಿ ಭಕ್ತರು ಕುಗ್ಗಿರಲಿಲ್ಲ. ಆದರೆ ದೇವರು ಕೊಟ್ಟು ಹಾಗೂ ಕಸಿದು ನೋಡುತ್ತಾನೆ ಎಂದು ಭಕ್ತ ಸಮೂಹ ಜಗತ್ತಿಗೆ ಎದುರಾಗಿರುವ ಸಂಕಷ್ಟ ಸಂದರ್ಭದಲ್ಲಿ ಸಂಕ್ಷಿಪ್ತ ಜಾತ್ರೆ ಹಾಗೂ ಹಬ್ಬಗಳಲ್ಲಿ ಸಂಕಷ್ಟ ಪರಿಹಾರಕ್ಕೆ ಪ್ರಾರ್ಥಿಸುತ್ತಿದ್ದಾರೆ ಎಂದರು.
ಮಾನವ ಸಂಬಂಧಗಳು ಹಾಗೂ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ದಿನಮಾನದಲ್ಲಿ ಮಾನವೀಯತೆಗೆ ಮಹತ್ವ ನೀಡಲು ಬಂದಿರುವ ಕಾಲಘಟ್ಟವಾಗಿದೆ. ಹೀಗಾಗಿ ಜಗತ್ತಿಗೆ ಎದುರಾಗಿರುವ ಕಂಟಕ ದೂರವಾಗಲಿ ಎಂದು ಮಠದಿಂದ ಪ್ರಾರ್ಥಿಸುತ್ತೇವೆ ಎಂದರು.
ಕೊರೋನಾ ಮುಂಜಾಗ್ರತ ಕ್ರಮವಾಗಿ ಸೂಡಿಯ ಪ್ರಾಥಮಿಕ ಆರೋಗ್ಯ ಇಲಾಖೆಯಿಂದ ಮಠಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಸ್ಯಾನಿಟೆಸರ್ ಹಾಗೂ ದೇಹದ ಉಷ್ಣ ತಪಾಸಣೆ ಮಾಡಲಾಯಿತು. ಕೊರೋನಾ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪಾಲಿಸಲು ಪಂಚಾಯ್ತಿ ಹಾಗೂ ಗಜೇಂದ್ರಗಡ ಪೊಲೀಸ್ ಠಾಣೆಯ ಸಹಕಾರವನ್ನು ಮಠದಿಂದ ಪಡೆಯಲಾಗಿತ್ತು.
ಈ ವೇಳೆ ಉಮೇಶ ಲಮಾಣಿ, ರಾಜು ಮುರಗಿ, ಸುನೀಲ ಮಾರನಬಸರಿ, ನವೀನ ಹೆಬ್ಬಾರೆ ಸೇರಿ ಇತರರು ಇದ್ದರು.


Spread the love

LEAVE A REPLY

Please enter your comment!
Please enter your name here