ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತಕ್ಕೂ ಹೆಚ್ಚು ವರ್ಷಗಳಾದ ಮೇಲೆ ಕರ್ನಾಟಕದಲ್ಲಿ ಭರ್ಜರಿಯಾಗಿ ತಮ್ಮ ಹಕ್ಕು ಪಡೆಯಲು ಹೋರಾಟಗಳು ಪಾದಯಾತ್ರೆ ಮೂಲಕ ನಡೆಯುತ್ತಿವೆ.
ಆದರೆ ನಮ್ಮ ಮುಸ್ಲಿಮ್ ನಾಯಕರು, ಕಾನೂನು ಪಂಡಿತರು, ವಿದ್ವಾಂಸರು ಸೇರಿದಂತೆ ಹೋರಾಟಗಾರರೆಲ್ಲರೂ ಸಾಚಾರ ಸಮಿತಿಯ ವರದಿ, ರಂಗನಾಥ್ ಮಿಶ್ರಾ ವರದಿ ಶಿಪಾರಸ್ಸಿಗಾಗಿ ಜನಾಂದೋಲನ ಆರಂಭಿಸಲು ಮುಂದಾಗಬೇಕು ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಜಾಕ್ ನದಾಫ್ ಮುಸ್ಲಿಂ ನಾಯಕರಲ್ಲಿ ಮನವಿ ಮಾಡಿದ್ದಾರೆ.
ವಾಲ್ಮೀಕಿ ಜನಾಂಗ ಮೀಸಲಾತಿಯಲ್ಲಿ ಶೇ 7% ಹಿಗ್ಗಿಸಲು ಹೋರಾಡುತ್ತಿದೆ. ರಾಜಕೀಯ ಅಧಿಕಾರ ಅನುಭವಿಸಿಯೂ ಕೂಡ ಕುರುಬ ಸಮುದಾಯ ಎಸ್.ಟಿ ಸೇರ್ಪಡೆಗೆ ಬೇಡಿಕೆ ಸಲ್ಲಿಸಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಬೆಳೆಸಿದೆ.
ಎಲ್ಲಾ ರಂಗದಲ್ಲಿ ಮುಂಚೂಣಿಯಲ್ಲಿರುವ ಪಂಚಮಸಾಲಿ ಸಮಾಜ 2A ಗೆ ಸೇರಿಸುವದಕ್ಕಾಗಿ ಸರ್ಕಾರದ ಕಣ್ಣು ತೆರೆಯಲು ಕೂಡಲಸಂಗಮದಿಂದ ಬೆಂಗಳೂರಿಗೆ 700km ಪಾದಯಾತ್ರೆ ಆರಂಭಿಸಿದ್ದಾರೆ.
2B ನಲ್ಲಿ ಕ್ರೈಸ್ತರನ್ನು, ಜೈನರನ್ನು ಇಟ್ಟುಕೊಂಡ ಮುಸ್ಲಿಮ್ ಸಮುದಾಯ ಮಾತ್ರಾ ಅನುಮಾನಕ್ಕೆ ಕಾರಣವಾಗಿದೆ ಎಂದರು.
ಈ ಸಮಯದಲ್ಲಿ ಕಾನೂನು ಬಲ್ಲವರು ಮಾತ್ರ ಹೋರಾಟಗಾರರಿಗೆ, ರಾಜಕೀಯ ಧುರೀಣರಿಗೆ ಮಾರ್ಗದರ್ಶನ ನೀಡಿ ಸಾಮಾಜಿಕ ನ್ಯಾಯ ಪಡೆದುಕೊಳ್ಳಲು ಇದು ಸೂಕ್ತ ಸಮಯವಾಗಿದೆ ಎಂದಿದ್ದಾರೆ.
ಅದು ಸಾಚಾರ ಸಮಿತಿಯ ವರದಿ ಶಿಫಾರಸ್ಸಿಗೋ ಅಥವಾ ರಂಗನಾಥ ಮಿಶ್ರಾ ವರದಿ ಶಿಪಾರಸ್ಸಿಗೋ ಒಟ್ಟಿನಲ್ಲಿ ದೇಶಾದ್ಯಂತ ಜನಾಂದೋಲನದ ಮಾದರಿಯಲ್ಲಿ ಹೋರಾಟಕ್ಕಿಳಿಯುವ ಸುವರ್ಣ ಯುಗಾರಂಭ ಮಾತ್ರ ಮತ್ತೆ ನಮ್ಮ ನಾಡಿನಿಂದ ಆರಂಭವಾಗಲಿ ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ.
ದಾರಿ ಕಾಣದ ಯುವ ನಾಯಕರಿಗೆ, ಹೋರಾಟಗಾರರಿಗೆ ದಾರಿದೀಪವಾಗಿ ಸಂವಿಧಾನ ಬದ್ಧ ಹಕ್ಕನ್ನು ಪಡೆದುಕೊಳ್ಳುವಂತೆ ಶಕ್ತಿ ತುಂಬಿ ಎಂದು ಮುಸ್ಲಿಮ್ ನಾಯಕರು, ಕಾನೂನು ಪಂಡಿತರು, ವಿದ್ವಾಂಸರು ಹೋರಾಟಗಾರರಲ್ಲಿ ಡಾ. ಅಬ್ದುಲ್ ರಜಾಕ್ ನದಾಫ್ ಮನವಿ ಮಾಡಿದ್ದಾರೆ.