ವಿಜಯಸಾಕ್ಷಿ ಸುದ್ದಿ, ಹಾವೇರಿ
‘ಮೀರ್ ಸಾಧಿಕ್ರು ಎಲ್ಲಿಲ್ಲ, ಎಲ್ಲ ಕಡೆಗಳಲ್ಲೂ ಇದ್ದಾರೆ. ಇವರಿಂದಲೇ ಎಲ್ಲರ ಸೋಲು. ನಿಂದಕರು ಇರಬೇಕು ಹಂದಿಯಂತೆ, ದುಷ್ಮನ್ ಕಿದರ್ ಹೈ ಅಂದರೆ ಬಗಲ್ ಮೇ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಟುವಾಗಿ ಹೇಳಿದರು.
ಹಾವೇರಿಯಲ್ಲಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು,
ಸಿದ್ದರಾಮಯ್ಯನವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯರ ನಡುವೆ ಪರಸ್ಪರ ಹೊಂದಾಣಿಕೆ ಇರಲಿಲ್ಲ. ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಂದಿನ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿ ಇರಲಿಲ್ಲವೆಂಬುವುದನ್ನು ಮತ್ತೊಮ್ಮೆ ಮೆಲುಕು ಹಾಕಿದರು.
ಮೈತ್ರಿ ಸರ್ಕಾರವಿದ್ದಾಗ ಒಬ್ಬರನ್ನೊಬ್ಬರು ನೋಡಿ ಒಂದೊಂದು ಹೇಳಿಕೆ ನೀಡಿದರು. ಇದರಿಂದ ದಾರಿ ತಪ್ಪಿಸುವ ಕೆಲಸವಾಯಿತು. ಯಾರಿಗೆ ಕೆಲಸವಾಗಿಲ್ಲ ಅವರೆಲ್ಲ ತಿರುಗಿ ಬೀಳುತ್ತಾರೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಚಾಮುಂಡೇಶ್ವರಿ ಕ್ಷೇತ್ರದ ಜನಸಂಪರ್ಕ ಕಡಿಮೆ ಆಗಿತ್ತು. ಅಧಿಕಾರವಿದ್ದಾಗ ಎಲ್ಲರೂ ಹಿಂದೆ ಬಂದು ಕೆಲಸ ಮಾಡಿಸಿಕೊಂಡಿರುತ್ತಾರೆ. ಅದರಲ್ಲಿ ತೊಂಬತ್ತೊಂಬತ್ತು ಕೆಲಸವಾಗಿ ಒಂದು ಕೆಲಸವಾಗದಿದ್ದರೂ ಜನ ತಿರುಗಿ ಬೀಳುತ್ತಾರೆ. ಸಿದ್ದರಾಮಯ್ಯನವರ ಪರಿಸ್ಥಿತಿಯೂ ಹಾಗೆ ಆಗಿರಬಹುದು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.