ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,
ಬೆಂಗಳೂರು: ಬಿಜೆಪಿ 17 ಜನರಿಂದಲಷ್ಟೇ ಅಧಿಕಾರಕ್ಕೆ ಬಂದಿದೆಂಬುವುದು ಸುಳ್ಳು. ನಾವು 105 ಜನ ಶಾಸಕರು ಇರದಿದ್ದರೆ ಸರ್ಕಾರ ಹೇಗೆ ರಚನೆಯಾಗುತ್ತಿತ್ತು? ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ನಾವು ಗೆದ್ದಿದ್ದೇವೆ. ಹೀಗಾಗಿ ಮೊದಲಿಗೆ 105 ಶಾಸಕರು, ನಂತರ ಉಳಿದವರು.

ಪಕ್ಷದವರಿಗೆ ಆದ್ಯತೆ ನೀಡಬೇಕು ಎಂದು ಹೇಳುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸಲು ಕಾರಣಿಕರ್ತರು ಯಾರು ಎಂಬ ಚರ್ಚೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿಧಾನಸೌಧದಲ್ಲಿಂದು ನಾಂದಿ ಹಾಡಿದ್ದಾರೆ.
ಇದಕ್ಕೆ ಪ್ರತ್ತ್ಯುತ್ತರವಾಗಿ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ 105 ಜನ ಶಾಸಕರಿದ್ದಾಗ ಸರ್ಕಾರ ರಚಿಸಲಿಲ್ಲ ಯಾಕೆ ಎಂದು ತಿರುಗೇಟು ನೀಡಿದ್ದಾರೆ.
ರೇಣುಕಾಚಾರ್ಯ ಹೇಳಿದ್ದಿಷ್ಟು;
ಯಾರೋ ಒಬ್ಬರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ. 17 ಜನರೊಂದಿಗೆ 105 ಜನರು ಇದ್ದಿದ್ದರಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದ್ದು. 17 ಜನರ ಬಗ್ಗೆ ಗೌರವವಿದ್ದು, ಅವರಿಗೆ ಯೋಗ್ಯವಾದ ಸ್ಥಾನಮಾನ ನೀಡಿದೆ. ಅವರು ಕಾಂಗ್ರೆಸ್ ಜೆಡಿಎಸ್ ಪಕ್ಷದಿಂದ ಬೇಸತ್ತು ಬಿಜೆಪಿಗೆ ಬಂದಿದ್ದಾರೆ. ನನ್ನಿಂದಲೇ ಸರ್ಕಾರ ರಚನೆಯಾಗಿದೆ ಎಂದು ಹೇಳುವವರು ಅರ್ಥ ಮಾಡಿಕೊಳ್ಳಬೇಕು ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಎಂಟಿಬಿ ನಾಗರಾಜ್ ಹೇಳಿದ್ದಿಷ್ಟು
ಪಕ್ಷದಲ್ಲಿ 105 ಶಾಸಕರಿದ್ದಾಗ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲವ್ಯಾಕೆ. 17 ಜನರು ಬಂದಿರುವುದರಿಂದಲೇ ಸರ್ಕಾರ ಸ್ಥಾಪಿತವಾಗಿರುವುದನ್ನು ಮರೆಯಬಾರದು. ನಮ್ಮ ಹಿಂದಿನ ಪಕ್ಷಗಳಿಗೆ ರಾಜೀನಾಮೆ ನೀಡಿ, ಬಿಜಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿದ್ದೇವೆ. ಹಾಗಾಗಿ ಈಗ ನಾವೆಲ್ಲರೂ ಬಿಜೆಪಿಯವರೇ ಎಂದಿದ್ದಾರೆ.

ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಮೂಲ ಹಾಗೂ ವಲಸಿಗ ಬಿಜೆಪಿಗರ ಮಧ್ಯೆ ಬೂದಿ ಮುಚ್ಚಿದ ಕೆಂಡದಂತಿರುವ ಮುನಿಸು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಹೇಳಿಕೆಯಿಂದಾಗಿ ಮತ್ತೊಮ್ಮೆ ಸ್ಪೋಟಗೊಂಡಂತಾಗಿದೆ.