ರೈತರಿಗೆ ಯಾವುದೇ ರೀತಿಯ ನೀರಿನ ತೊಂದರೆಯಾಗದಂತೆ ಕ್ರಮ : ಆನಂದ್ ಸಿಂಗ್

0
Spread the love

ತುಂಗಭದ್ರಾ ಜಲಾಶಯ 114ನೇ ನೀರಾವರಿ ಸಲಹಾ ಸಮಿತಿ ಸಭೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಡದಂಡೆ ಮತ್ತು ಬಲ ದಂಡೆ ಕಾಲುವೆಗಳ ವ್ಯಾಪ್ತಿಯ ರೈತರಿಗೆ ಯಾವುದೇ ರೀತಿಯ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಕರ್ನಾಟಕ ಸರ್ಕಾರದ ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.

ಅವರು ಇಂದು ಮುನಿರಾಬಾದ್‌ನ ಕಾಡಾ ಕಚೇರಿಯಲ್ಲಿ ನಡೆದ ತುಂಗಭದ್ರ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 114ನೇ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಒಂದು ವೇಳೆ ನೀರಿನ ತೊಂದರೆ ಯಾಗುವ ಲಕ್ಷಣಗಳು ಕಂಡುಬಂದರೆ ಮುಂಜಾಗೃತೆಯಾಗಿ ನೀರಾವರಿ ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ದೇವರ ದಯೆಯಿಂದ ನೀರಿನ ಹರಿವು ಪ್ರಮಾಣ ಹೆಚ್ಚಾದರೆ ನಮಗೆ ಯಾವುದೇ ಸಮಸ್ಯೆ ಇರುವುದಿಲ್ಲ. ನಾವೆಲ್ಲರೂ ಈ ಹಿಂದೆ ತುಂಗಭದ್ರಾ ಡ್ಯಾಂನ ನೀರಿನ ಬಳಕೆ ಕುರಿತು ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಮಾಡಿಕೊಂಡಿರುವ ಬೆಳೆಗಳನ್ನು ಬೆಳೆಯುವ ಒಪ್ಪಂದವನ್ನು ನಾವು ಯಾರೂ ಪಾಲಿಸುತ್ತಿಲ್ಲ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಹೆಕ್ಟೆರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದೇವೆ. ಹೀಗಾಗಿ ನೀರಿನ ಸಮಸ್ಯೆಯಾಗುತ್ತಿದೆ ಎಂದರು.

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ

ನ. 25 ರಿಂದ ಡಿಸೆಂಬರ್. 02 ರವರೆಗೆ ಮೈಲ್-104ರ ಮೇಲ್ಭಾಗದಲ್ಲಿ ಬರುವ ವಿತರಣಾ ಕಾಲುವೆಗಳನ್ನು ನಿಯಂತ್ರಿಸಿ ಗಣೇಕಲ್ ಜಲಾಶಯಕ್ಕೆ ನೀರನ್ನು ಸಂಗ್ರಹಿಸಿಕೊಳ್ಳುವುದು ಹಾಗೂ ರಾಯಚೂರು ನಗರ/ ಪಟ್ಟಣಗಳಿಗೆ ಕುಡಿಯುವ ನೀರಿಗಾಗಿ ಮತ್ತು ವಿತರಣಾ ಕಾಲುವೆ ಅಡಿ ನಿಂತಿರುವ ಬೆಳೆಗಳನ್ನು ಸಂರಕ್ಷಿಸುವುದು. ಡಿ. 01 ರಿಂದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಲಭ್ಯವಾಗಬಹುದಾದ, ಡಿ. 01 ರಿಂದ 20 ರವರೆಗೆ 2400 ಕ್ಯೂಸೆಕ್ಸನಂತೆ 20 ದಿನಗಳಿಗೆ, ಡಿ. 21 ರಿಂದ 31 ರವರೆಗೆ 3300 ಕ್ಯೂಸೆಕ್ಸನಂತೆ 101 ದಿನಗಳಿಗೆ, 2021ರ ಏಪ್ರಿಲ್. 01 ರಿಂದ ಮೇ. 10 ರವರೆಗೆ ಎಡದಂಡೆ ವಿಜಯನಗರ ಕಾಲುವೆಗಳಿಗಾಗಿ 100 ಕ್ಯೂಸೆಕ್ಸ್ನಂತೆ 40 ದಿನಗಳಿಗೆ, ಏ. 01 ರಿಂದ 10 ರವರೆಗೆ 2000 ಕ್ಯೂಸೆಕ್ಸನಂತೆ 10 ದಿನಗಳಿಗೆ ಕುಡಿಯುವ ನೀರಿಗಾಗಿ (ಈ ಅವಧಿಯಲ್ಲಿ ಫೆಬ್ರವರಿ. 15ರ ಬೆಳಗ್ಗೆ 08 ರಿಂದ ಫೆ. 20ರ ಬೆಳಗ್ಗೆ 08 ರವರೆಗೆ ತಖ್ತೆ-2ರಲ್ಲಿ ತೋರಿಸಿದಂತೆ ವಡ್ಡರಹಟ್ಟಿ, ಸಿಂಧನೂರು ವಿಭಾಗಗಳ ವಿತರಣಾ ಕಾಲುವೆಗಳನ್ನು ಆನ್/ಆಫ್ ಮಾಡಿ ಮೈಲ್-104 ರಲ್ಲಿ ಬರುವ ಸಮತೋಲನ ಜಲಾಶಯಕ್ಕೆ ಪೂರೈಕೆ ಮಾಡಿ ಸಂಗ್ರಹಿಸಿಕೊಂಡು ಯರಮರಸ್ ವಿಭಾಗದ ಅಚ್ಚುಕಟ್ಟಿನಲ್ಲಿ ನಿಂತಿರುವ ಬೆಳಗಳನ್ನು ಸಂರಕ್ಷಿಸುವುದು ಹಾಗೂ ರಾಯಚೂರು ಮತ್ತು ಇತರೆ ಕುಡಿಯುವ ನೀರು ಯೋಜನೆಗಳಿಗೆ ನೀರು ಒದಗಿಸುವುದು.) ಅಥವಾ ಕಾಲುವೆಯಡಿ ಲಭ್ಯತೆ ಇರುವವರೆಗೆ ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ

ಡಿಸೆಂಬರ್. 01 ರಿಂದ 10 ರವರೆಗೆ 10 ದಿನಗಳಿಗೆ ನೀರು ನಿಲುಗಡೆ. ಡಿ. 11 ರಿಂದ 20 ರವರೆಗೆ 750 ಕ್ಯೂಸೆಕ್ಸನಂತೆ 10 ದಿನಗಳಿಗೆ, ಡಿ. 21 ರಿಂದ 31 ರವರೆಗೆ 11 ದಿನಗಳಿಗೆ ನೀರು ನಿಲುಗಡೆ. 2021ರ ಜನವರಿ. 01 ರಿಂದ 15 ರವರೆಗೆ 770 ಕ್ಯೂಸೆಕ್ಸನಂತೆ 15 ದಿನಗಳಿಗೆ ಕಾಲುವೆಯಡಿ ಲಭ್ಯತೆ ಇರುವವರೆಗೆ ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ. ಹರಿವಿನ ಪ್ರಮಾಣಗಳು ಟ್ರಾನ್ಸಮಿಷನ್ ಲಾಸ್‌ಗಳನ್ನೊಳಗೊಂಡಿರುತ್ತವೆ.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ

ಡಿ. 01 ರಿಂದ 25 ರವರೆಗೆ 250 ಕ್ಯೂಸೆಕ್ಸನಂತೆ 25 ದಿನಗಳಿಗೆ, ಡಿ. 26 ರಿಂದ 31 ರವರೆಗೆ 660 ಕ್ಯೂಸೆಕ್ಸನಂತೆ 100 ದಿನಗಳಿಗೆ ದಿನಾಂಕ ಏಪ್ರಿಲ್. 01 ರಿಂದ 10 ರವರೆಗೆ 200 ಕ್ಯೂಸೆಕ್ಸನಂತೆ 10 ದಿನಗಳಿಗೆ ಕುಡಿಯುವ ನೀರಿನ ಸಲುವಾಗಿ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ. ಹರಿವಿನ ಪ್ರಮಾಣಗಳು ಟ್ರಾನ್ಸಮಿಷನ್ ಲಾಸ್‌ಗಳನ್ನೊಳಗೊಂಡಿರುತ್ತವೆ.

ರಾಯಾ ಬಸವಣ್ಣ ಕಾಲುವೆ

ನವೆಂಬರ್. 16 ರಿಂದ 2021ರ ಜನವರಿ. 15 ರವರೆಗೆ 61 ದಿನಗಳಿಗೆ ನೀರು ನಿಲುಗಡೆ. ಜನವರಿ. 16 ರಿಂದ ಮೇ. 31 ರವರೆಗೆ 180 ಕ್ಯೂಸೆಕ್ಸನಂತೆ 136 ದಿನಗಳಿಗೆ ರವರೆಗೆ ಅಥವಾ ಈ ಕಾಲುವೆಯಡಿ ನೀರು ಲಭ್ಯವಿರುವವರೆಗೆ ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.

ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ

ಡಿಸೆಂಬರ್. 01 ರಿಂದ 25ಕ್ಯೂಸೆಕ್ಸ ನಂತೆ ಅಥವಾ ಕಾಲುವೆಯ ಮಟ್ಟ 1585.00 ಅಡಿ ತಲುಪುವವರೆಗೆ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ತುಂಗಭದ್ರಾ ಯೋಜನೆಯ 114ನೇ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಸಂರಕ್ಷಿಸಲು ಹಾಗೂ ಹಿಂಗಾರು ಹಂಗಾಮಿಗೆ ಲಭ್ಯವಾಗುವ ನೀರನ್ನು ಎಡದಂಡೆ ಕಾಲುವೆ, ಬಲದಂಡೆ ಕಾಲುವೆಗಳಿಗೆ ಹಾಗೂ ವಿಜಯನಗರ ಕಾಲುವೆಗಳಿಗೆ ಮಿತ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗಾಗಿ ನೀರು ಬಿಡುವ ಬಗ್ಗೆ ಸುಧೀರ್ಘವಾಗಿ ಮತ್ತು ವಿಸ್ತೃತವಾಗಿ ಚರ್ಚಿಸಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಮಾತನಾಡಿ, ನಮ್ಮ ರೈತರು ಭತ್ತದ ಬೆಳೆ ಒಂದನ್ನೇ ಬೆಳೆಯದೇ ಪ್ರತಿ ವರ್ಷ ಒಂದೊಂದು ಬೆಳೆಗಳನ್ನು ಬದಲಾಯಿಸಿ ತಮ್ಮ ಹೊಲ-ಗದ್ದೆಗಳಲ್ಲಿ ಬೆಳೆಯಬೇಕು. ಇದರಿಂದ ಭೂಮಿಯ ಫಲವತ್ತತೆ ನಾಶವಾಗದೇ ಇಳುವರಿಯೂ ಹೆಚ್ಚುತ್ತದೆ. ಆದರೆ, ಈ ಭಾಗದ ರೈತರು ಹೆಚ್ಚಾಗಿ ಭತ್ತವನ್ನು ಪ್ರತಿ ಬಾರಿ ಬೆಳೆಯುತ್ತಿರುವುದರಿಂದ ನೀರಿನ ಸಮಸ್ಯೆ ಮಾತ್ರವಲ್ಲ ಭೂಮಿಯ ಫಲವತ್ತತೆಯೂ ಕಡಿಮೆ ಯಾಗುತ್ತದೆ. ರೈತರು ತಮ್ಮ ಭೂಮಿಯ ಫಲವತ್ತತೆ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಅಂದಾಗ ಮಾತ್ರ ಭೂಮಿಯನ್ನು ದೀರ್ಘ ಕಾಲದವರೆಗೆ ಸಂರಕ್ಷಿಸಬಹುದು ಎಂದು ಹೇಳಿದರು.

ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಮಾತನಾಡಿ, ಈ ಬಾರಿ ಅತಿಯಾಗಿ ಮಳೆಯಾಗಿರುವುದರಿಂದ ತುಂಗಭದ್ರಾ ಎಡದಂಡೆ ಕಾಲುವೆ ಭಾಗಗಳಲ್ಲಿ ಬಿತ್ತನೆ ತಡವಾಗಿ ಮಾಡಲಾಗಿದೆ. ಮಸ್ಕಿ ಮತ್ತು ಜವಳಗೇರಾ ಉಪ ವಿಭಾಗದಲ್ಲಿ ಜೋಳ, ಸೂರ್ಯಕಾಂತಿ ಹೆಚ್ಚಾಗಿ ಬಿತ್ತನೆಯಾಗಿರುವುದರಿಂದ ಜನವರಿ. 15 ರವರೆಗೆ ನೀರು ಬೇಕಾಗುತ್ತದೆ ಎಂದು ರೈತರು ಹೇಳುತ್ತಿದ್ದಾರೆ. ಹಾಗಾಗಿ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಸಿರಗುಪ್ಪಾ ಶಾಸಕ ಎಂ.ಎಸ್ ಸೋಮಲಿಂಗಪ್ಪ, ಕಂಪ್ಲಿ ಶಾಸಕ ಜೆ.ಎನ್ ಗಣೇಶ, ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡಯ್ಯ, ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ, ಕೊಪ್ಪಳ ಎಸ್.ಪಿ ಟಿ.ಶ್ರೀಧರ್, ರಾಯಚೂರು ಎಸ್.ಪಿ ನಿಕಮ್ ಪ್ರಕಾಶ ಅಮ್ರಿತ್ ಹಾಗೂ ಮುನಿರಾಬಾದ್ ಕಾಡಾ ಕಚೇರಿಯ ಮುಖ್ಯ ಇಂಜಿನಿಯರ್ ಎಸ್.ಹೆಚ್.ಮಂಜಪ್ಪ, ಅಧೀಕ್ಷಕ ಅಭಿಯಂತರರಾದ ಬಸವರಾಜ ಹಾಗೂ ಪ್ರಕಾಶ, ವಡ್ಡರಹಟ್ಟಿ ಕಾರ್ಯನಿರ್ವಾಹಕ ಇಂಜಿನಿಯರ್ ರಮೇಶ ವಲ್ಕ್ಯಾಪುರ ಸೇರಿದಂತೆ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಮತ್ತು ನೀರಾವರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here