ಶಿರಹಟ್ಟಿ ತಾಲೂಕಿನಲ್ಲಿ ದೊರೆಯುತ್ತಿಲ್ಲ ಮಾಸಾಶನ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಶಿರಹಟ್ಟಿ
ಸತತ ಬರಗಾಲ, ಅತಿವೃಷ್ಟಿ ಹಾಗೂ ಕೊವಿಡ್-19 ನಿಂದ ತತ್ತರಿಸಿರುವಂತಹ ಬಡತನ ರೇಖೆಗಿಂತ ಕೆಳಗಿರುವಂತಹ ಜನತೆಗೆ ಸರಕಾರ ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನ ನೀಡುತ್ತಿದೆ. ಇತ್ತೀಚೆಗೆ ಜಿಲ್ಲಾಢಳಿತ ಫಲಾನುಭವಿಗಳ ಮನೆಗಳ ಬಾಗಿಲಿಗೆ ಮಂಜೂರಾತಿ ಪತ್ರವನ್ನು ನೀಡುತ್ತಿರುವುದು ಶ್ಲಾಘನೀಯ ಕಾರ‍್ಯ. ಆದರೆ ಶಿರಹಟ್ಟಿ ತಾಲೂಕಿನಲ್ಲಿ ಮಾತ್ರ ವಿವಿಧ ಮಾಸಾಶನಗಳ 562 ಅರ್ಜಿ ಇನ್ನೂ ಸಸ್ಪೆಂಡ್‌ನಲ್ಲಿಯೇ ಇವೆ. ಇವರ‍್ಯಾರಿಗೂ ಮಾಸಾಶನ ದೊರೆಯುತ್ತಿಲ್ಲ.
562ಅರ್ಜಿ ಸಸ್ಪೆಂಡ್…!
ಕಂದಾಯ ಇಲಾಖೆಯ ಅಂಕಿಅಂಶದ ಪ್ರಕಾರ ಇಂದಿರಾಗಾಂಧಿ ಓಎಪಿ-1ರಲ್ಲಿ 32, ಓಎಪಿ-2ರಲ್ಲಿ 48, ಓಎಪಿ-3ರಲ್ಲಿ 1, ಸಂಧ್ಯಾಸುರಕ್ಷಾ ಯೋಜನೆಯಡಿ 200, ವಿಧವಾ ವೇತನ 165, ಅಂಗವಿಕಲ ಮಾಸಾಶನ ಪಿಎಚ್‌ಪಿ-1 66, ಪಿಎಚ್‌ಪಿ-37, ಮನಸ್ವಿನಿ 13 ಹೀಗೆ ಶಿರಹಟ್ಟಿ ತಾಲೂಕಿನಾದ್ಯಂತ ಒಟ್ಟು 562 ಅರ್ಜಿಗಳು ವಿವಿಧ ಕಾರಣಗಳಿಂದ ಸಸ್ಪೆಂಡ್‌ನಲ್ಲಿದ್ದು, ಇವರಲ್ಲಿ ಅರ್ಜಿ ಹಾಕಿದವರು ತಮಗೆ ಮಾಸಾಶನ ಬರದೇ ಇರುವುದರಿಂದ ಕಚೇರಿಗೆ ಅಲೆದಾಡುವುದು ತಪ್ಪುತ್ತಿಲ್ಲ.

ತಾಂತ್ರಿಕ ಕಾರಣಗಳಿಂದ ಸಾಮಾಜಿಕ ಭದ್ರತೆ ಯೋಜನೆಯಡಿ ಅರ್ಜಿಗಳು ಸಸ್ಪೆಂಡ್‌ನಲ್ಲಿದ್ದು, ಇವುಗಳನ್ನು ಸರಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರವೇ ಅರ್ಹ ಫಲಾನುಭವಿಗಳಿಗೆ ಸರಕಾರದ ಸೌಲಭ್ಯ ತಲುಪಿಸುವುದಕ್ಕೆ ಕ್ರಮ ಕೈಕೊಳ್ಳಲಾಗುವುದು.
ಯಲ್ಲಪ್ಪ ಗೋಣೆಣ್ಣನವರ, ತಹಸೀಲ್ದಾರ, ಶಿರಹಟ್ಟಿ.
 

ಸಿಬ್ಬಂದಿಗಳ ಸಮನ್ವಯತೆ ಕೊರತೆ :
ಶಿರಹಟ್ಟಿಯ ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿಯ ಸಿಬ್ಬಂದಿ ಹಾಗೂ ಕಂದಾಯ ನಿರೀಕ್ಷಕ ಕಚೇರಿಯಲ್ಲಿಯ ಸಿಬ್ಬಂದಿ, ಸಂಬಂಧಿಸಿದ ಗ್ರಾಮಲೆಕ್ಕಾಧಿಕಾರಿಗಳು ಸರಿಯಾದ ಸಮಯಕ್ಕೆ ಅರ್ಜಿಗಳನ್ನು ಪರಿಶೀಲಿಸಿ ಕಳುಹಿಸುವಲ್ಲಿ ವಿಳಂಬ ಸೇರಿದಂತೆ ಸಿಬ್ಬಂದಿಗಳ ಮಧ್ಯೆ ಸಮನ್ವಯದ ಕೊರತೆ ಇರುವುದರಿಂದ ಸರಕಾರ ಅರ್ಹ ಫಲಾನುಭವಿಗಳಿಗೆ ಮಾಸಾಶನ ನೀಡಲು ಮುಂದಿದ್ದರೂ ಸಹ ಇಲ್ಲಿಯ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಅದೆಷ್ಟೋ ಅರ್ಹ ಫಲಾನುಭವಿಗಳು ಸರಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ತಹಸೀಲ್ದಾರ ಕ್ರಮ ವಹಿಸುವುದು ಅವಶ್ಯ :
ಸಾಮಾಜಿಕ ಭದ್ರತೆ ಯೋಜನೆಯಡಿ ವಿವಿಧ ಮಾಸಾಶನಗಳನ್ನು ಪಡೆಯುತ್ತಿರುವಂತಹ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಹಣ ಸಂದಾಯವಾಗದೇ ಇರುವುದಕ್ಕೆ ಹಲವಾರು ತಾಂತ್ರಿಕ ಕಾರಣಗಳನ್ನು ಕಚೇರಿಗಳ ಸಿಬ್ಬಂದಿಗಳು ಹೇಳುತ್ತಿದ್ದು, ಇದಕ್ಕೆ ತಹಶೀಲ್ದಾರ ಶಾಶ್ವತ ಪರಿಹಾರವನ್ನು ಕಲ್ಪಿಸಿ ಸರಕಾರದ ಸೌಲಭ್ಯದಿಂದ ಅರ್ಹ ಫಲಾನುಭವಿಗಳು ವಂಚಿತರಾಗಬಾರದಂತಹ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ವಹಿಸುವುದು ಅವಶ್ಯವಿದೆ.


Spread the love

LEAVE A REPLY

Please enter your comment!
Please enter your name here