ಸರಕಾರ ಖಾಸಗಿ ಶಾಲಾ ಶಿಕ್ಷಕರಿಗೆ ಗೌರವಧನ ನೀಡಬೇಕು 

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ  
ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 5 ಲಕ್ಷ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಸರಕಾರ ಮಾಸಿಕ 5 ಸಾವಿರದಿಂದ 10 ಸಾವಿರ ರೂ.ವರೆಗೆ ಶಾಲೆ ಆರಂಭವಾಗುವವರೆಗೂ ಪ್ರತಿ ತಿಂಗಳೂ ಗೌರವಧನ ನೀಡಬೇಕು ಮತ್ತು ವಿದ್ಯಾಗಮ ಯೋಜನೆ ಅಡಿಯಲ್ಲಿ ಪಾಠ ಮಾಡಲು ಹೋಗಿ 100 ಕ್ಕೂ ಹೆಚ್ಚು ಮೃತಪಟ್ಟ ಶಿಕ್ಷಕರಿಗೆ ಕೊವಿಡ್-19 ವಾರಿಯರ‍್ಸ್‌ಗೆ  ನೀಡುವ ಪರಿಹಾರ ನೀಡಬೇಕು ಎಂದು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ರಾಜ್ಯ ಕಾರ್ಯದರ್ಶಿ ಶಶಿಧರ ದಿಂಡೂರ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ರಾಜ್ಯ ಸರಕಾರ ಶಾಲಾ ಪ್ರಾರಂಭಿಸಲು ಗೊಂದಲದ ಹೇಳಿಕೆ ನೀಡುವ ಮೂಲಕ ಶಿಕ್ಷಣ ಕ್ರಮವನ್ನು ಹಳಿ ತಪ್ಪಿಸುತ್ತಿರುವುದರಿಂದ ಪಾಲಕರು, ಮಕ್ಕಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಒತ್ತಡಕ್ಕೆ ಒಳಗಾಗಿವೆ. ಶಾಲಾ ಪ್ರಾರಂಭದ ಬಗ್ಗೆ ಸರಕಾರ ಸ್ಪಷ್ಟ ನಿರ್ದೇಶನ ನೀಡಬೇಕು.
2020-21 ನೇ ಸಾಲಿನ ವಾರ್ಷಿಕ ಪಠ್ಯಕ್ರಮ  ಮತ್ತು ವೇಳಾ ಪಟ್ಟಿಯನ್ನು  ನಿಗಧಿ ಪಡೆಸಬೇಕು. ಶಾಲೆಗಳಲ್ಲಿ ಶುಲ್ಕ ಪಡೆಯುವ ಬಗ್ಗೆ ಸ್ಪಷ್ಟ ಸೂಚನೆ ನೀಡಬೇಕು. ಪಠ್ಯಪುಸ್ತಕಗಳ ಖರೀದಿಗೆ ಖಾಸಗಿ ಶಾಲೆಗಳ ಮೇಲೆ ಒತ್ತಡ ಹೇರಬಾರದು. 2018-19 ಹಾಗೂ 2019-20 ಸಾಲಿನ ಆರ್‌ಟಿಇ ಬಾಕಿ ಶುಲ್ಕವನ್ನು ಮಂಜೂರು ಮಾಡಬೇಕು. ಆನ್‌ಲೈನ್ ಕ್ಲಾಸ್‌ಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಶಾಲಾ ಪುನಾರಂಭಕ್ಕೂ ಮುನ್ನ ಪಾಲಕರ, ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಒಳಗೊಂಡ ಸಮಿತಿಯಲ್ಲಿ ಚರ್ಚಿಸಿ ರೂಪರೇಶ ನಿರ್ದೇರಿಸಬೇಕೆಂದು ಶಶಿಧರ ದಿಂಡೂರ ಸರಕಾರಕ್ಕೆ ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಜಯದೇವ ಮೆಣಸಗಿ ಮಾತನಾಡಿ, ಕಳೆದ 6-7 ತಿಂಗಳಿಂದ ಪಾಲಕರು, ಮಕ್ಕಳು ಸರಕಾರದ ಗೊಂದಲದ ನೀತಿಗಳಿಂದ ಒತ್ತಡದಲ್ಲಿದ್ದಾರೆ. ಸಚಿವರು ತಮ್ಮದೇ ಆದ ಗೊತ್ತುವಳಿ, ನಿರ್ದೇಶನ ಮೂಲಕ ಮಕ್ಕಳಿಗೆ, ಪಾಲಕರಿಗೆ ಹಾಗೂ ಶಾಲೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಠ್ಯಕ್ರಮ ಅಳವಡಿಸಬೇಕು. ಸರಕಾರ ತಾರತಮ್ಯ ಮಾಡದೇ ಎಲ್ಲ ಶಾಲೆಗಳಿಗೂ ಒಂದೇರೀತಿ ದಿಕ್ಸೂಚಿ ಸೂಚಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಂ.ಪಿ.ಸೂನಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here