ಸಹನಾ ಸಾಧನೆ: ಮಾಚೇನಹಳ್ಳಿ ಗ್ರಾಪಂನಿಂದ ಸನ್ಮಾನ, ಹಿತ್ತಲು ಗಿಡದ ಸಾಮರ್ಥ್ಯ ಅರಿಯುವ ಸಂದರ್ಭ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ; ಪಿಎಸ್‌ಐ ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ 26ನೇ ರ‍್ಯಾಂಕ್ ಪಡೆದ ಹಳ್ಳಿ ಹುಡುಗಿಗೆ ಭಾನುವಾರ ಸ್ಥಳೀಯ ಗ್ರಾಮ ಪಂಚಾಯತಿ ಸನ್ಮಾನ ಮಾಡಿದೆ. ತಮ್ಮೂರ ಹುಡುಗಿಯ ಸಾಧನೆಯನ್ನು ಮಾಧ್ಯಮಗಳಿಗೆ ತಲುಪಿಸಿದ ತೆಗ್ಗಿನ ಭಾವನೂರಿನ ಫಾರೂಕ್ ಕೋಟೆಹಾಳ ಸೇರಿ ಹಲವಾರು ಯುವಕರು ಈ ಸನ್ಮಾನದಲ್ಲಿ ತಮ್ಮೂರೇ ಗೆದ್ದಂತೆ ಪಾಲ್ಗೊಂಡಿದ್ದಾರೆ.

ಮಾಚೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಗ್ಗಿನ ಭಾವನೂರ ಗ್ರಾಮದ ಸಹನಾ ಅವರ ಸಾಧನೆ ನಮ್ಮ ಗ್ರಾಮ ಪಂಚಾಯತಿಗೆ ಗೌರವ ಮತ್ತು ಖುಷಿ ತಂದಿದೆ. ಇಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಇನ್ನಷ್ಟು ಸೌಲಭ್ಯ ಒದಗಿಸಲು ಈ ಸಾಧನೆ ನಮಗೆ ಪ್ರೇರಣೆ ಆಗಿದೆ ಎಂದಿರುವ ಮಾಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಿರಿಯರು, ಮಾಜಿ ಸದಸ್ಯರು ಮತ್ತು ಯುವ ಮುಖಂಡರಾದ ಶಂಕರ ಮರಾಠಿ, ಆನಂದ ಮಾಳೆಕೊಪ್ಪ, ವೀರಣ್ಣ ಕೆಲೂರ ಹಾಗೂ ಖಾದರ್ ಕೋಟಿಹಾಳ ಸೇರಿದಂತೆ ಹಲವಾರು ಜನ ಸೇರಿ ಸಹನಾ ಅವರಿಗೆ ಹೃದಯಪೂರ್ವಕ ಸನ್ಮಾನ ಮಾಡಿದ್ದಾರೆ.

ಇದನ್ನೂ ಓದಿ ಪಿಎಸ್‌ಐ ಆದ ಕುಗ್ರಾಮದ ಯುವತಿ; ರಾಜ್ಯಕ್ಕೆ 26ನೇ ರ‍್ಯಾಂಕ್| ಕೋಚಿಂಗ್ ಇಲ್ಲ| ತನಗೆ ತಾನೇ ರೋಲ್ ಮಾಡೆಲ್

ವಿಜಯಸಾಕ್ಷಿ ಮೂಲಕ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನ ಭಾವನೂರಿನ ಯುವತಿ ಸಹನಾ ಪಾಟೀಲರ ಸಾಧನೆ ಈಗ ನಾಡಿನ ತುಂಬ ಸುದ್ದಿಯಾಗಿದೆ. ನಮ್ಮ ವಿಜಯಸಾಕ್ಷಿ ಸಂಸ್ಥೆಯ ಫೇಸ್‌ಬುಕ್, ಟ್ವಿಟರ್ ಮತ್ತು ಇ-ಮೇಲ್ ಖಾತೆಗಳಿಗೆ ಸಹಸ್ರಾರು ಜನ ಪ್ರತಿಕ್ರಿಯಿಸಿ ಸಹನಾರ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದು ಕೇವಲ ಸಹನಾ ಗೆಲುವಷ್ಟೇ ಅಲ್ಲ, ಮಾತೃಭಾಷೆಯಲ್ಲಿ ಆರಂಭಿಕ ಶಿಕ್ಷಣ ನೀಡಬೇಕು ಎಂಬ ನಿಲುವಿಗೆ ದೊರೆತ ಜಯ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಕ್ಕರೆ ಇನ್ನಷ್ಟು ಮಿಂಚಲಿದ್ದಾರೆ ಎಂದು ಹೇಳಿದ್ದಾರೆ.

ಹಿತ್ತಲ ಗಿಡ ಮದ್ದಲ್ಲ ಎಂಬ ಮಾತು ಅರ್ಥರಹಿತ ಎಂಬುದನ್ನು ವಿಜಯಸಾಕ್ಷಿ ನಿರೂಪಿಸುತ್ತಲೇ ಹೋಗಲಿದೆ. ಸಹನಾರವರಿಗೆ ಮತ್ತೊಮ್ಮೆ ಅಭಿನಂದನೆಗಳು.


Spread the love

LEAVE A REPLY

Please enter your comment!
Please enter your name here