ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ
ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ಮಂಗಳವಾರ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ರೋಣ ತಾಲೂಕು ಸಂಘದಿಂದ ಸ್ಥಳೀಯ ಶಾಸಕರ ಜನಸಂಪರ್ಕ ಕಾರ್ಯಾಲಯಲ್ಲಿ ಶಾಸಕ ಕಳಕಪ್ಪ ಬಂಡಿ ಅವರಿಗೆ ಮನವಿ ನೀಡಲಾಯಿತು.
ಸಂಘದ ತಾಲೂಕಾಧ್ಯಕ್ಷ ಶರಣು ಪೂಜಾರ ಮಾತನಾಡಿ, ಪಿಂಚಣಿ ನೌಕರರ ಜೀವನದ ಸಂಧ್ಯಾಕಾಲದ ಹಕ್ಕು. ಆದರೆ ಸರ್ಕಾರ ಇತ್ತೀಚೆಗೆ ಹಿಂದಿನ ಪಿಂಚಣಿ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ, ಹೊಸ ಪಿಂಚಣಿ ಯೋಜನೆ ಜಾರಿ ಮಾಡಿದೆ. ಹೀಗಾಗಿ ನಿವೃತ್ತಿ ಅನಂತರ ನೌಕರರ ಸಂಕಷ್ಟದ ದಿನಗಳನ್ನು ಎದುರಿಸುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ ರಾಜ್ಯ ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ತಕ್ಷಣವೇ ಹಳೆ ಪಿಂಚಣಿ ಯೋಜನೆ ಜಾರಿಗೆ ಮಾಡಲು ಮುಂದಾಗಬೇಕು. ಸೇವಾ ಅವಧಿಯಲ್ಲಿ ಕೂಡಿಟ್ಟ ಹಣದಿಂದ ಭವಿಷ್ಯದಲ್ಲಿ ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಶಾಸಕರು ನೌಕರರ ಹಳೆಯ ಪಿಂಚಣಿ ಯೋಜನೆಯ ಮರು ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿಗೆ ಪತ್ರ: ನೌಕರರ ಮನವಿ ಸ್ವೀಕರಿಸಿದ ಶಾಸಕ ಕಳಕಪ್ಪ ಬಂಡಿ, ಸರ್ಕಾರಿ ಎನ್ಪಿಎಸ್ ನೌಕರರ ಸಂಘದ ಮನವಿಗೆ ಸ್ಪಂದಿಸುವಂತೆ ತಕ್ಷಣವೇ ಸರ್ಕಾರಕ್ಕೆ ಪತ್ರ ಬರೆದು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಗಜೇಂದ್ರಗಡ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ್ ರಾಜೂರ, ಡಿ.ಆರ್. ಮ್ಯಾಗೇರಿ, ಜಯಪ್ರಕಾಶ್ ಭಜಂತ್ರಿ, ಆರ್.ಬಿ. ಮಾಂಡ್ರೆ, ಶಬ್ಬೀರ್ ನಿಶಾನ್ದಾರ, ಸಿದ್ದು ಪಾಡಾ, ಹೀನಾ ಕೌಜಲಗಿ, ಫಮೀದ ಬಡೇಖಾನ್, ಅನ್ನಪೂರ್ಣಾ ಇಟಗಿ, ರಾಮಜಿ ರಡ್ಡೇರ, ಸಂಗಮೇಶ ಕಡಗದ, ಪ್ರಭು ಹಾದಿಮನಿ, ಬಸವರಾಜ ದೇಸಾಯಿಗೌಡ್ರು, ಲೋಹಿತ್ ಮಸೂದೆ ಇದ್ದರು.
ಹಳೆಯ ಪಿಂಚಣಿ ಯೋಜನೆಯೇ ಇರಲಿ: ಮನವಿ
Advertisement