ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿರುವ ಬೆನ್ನಲ್ಲೇ ಸ್ಥಳೀಯ ಸಂಸ್ಥೆಯ ಸಿಂಹಾಸನಾಧೀಶ ಯಾರಾಗುತ್ತಾರೆಂಬ ಚರ್ಚೆ ಶುರುವಾಗಿದೆ. ಈಗಾಗಲೇ 18 ಸ್ಥಾನ ಗೆದ್ದಿರುವ ಬಿಜೆಪಿ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಾಗಿರುವ ಸ್ಪಷ್ಟ ಬಹುಮತ ಹೊಂದಿದ್ದು, 35ನೇ ವಾರ್ಡಿನಲ್ಲಿ ಜಯಶೀಲರಾಗಿರುವ ಉಷಾ ಮಹೇಶ ದಾಸರ ಅವರು ಅಧ್ಯಕ್ಷರಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

ಚುನಾವಣೆ ಪೂರ್ವದಲ್ಲೇ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಪ್ರವರ್ಗ-2ಎಗೆ ಮೀಸಲಿರಿಸಲಾಗಿದೆ. ಹೀಗಾಗಿ ಆಯ್ಕೆಗೊಂಡಿರುವ 18 ಜನ ಬಿಜೆಪಿ ಅಭ್ಯರ್ಥಿಗಳಲ್ಲಿ ಉಷಾ ದಾಸರ ಅವರೊಬ್ಬರೇ ಪರಿಶಿಷ್ಟ ಜಾತಿಗೆ ಸೇರಿದ ಸದಸ್ಯರಿದ್ದು, ಬಹುತೇಕ ಉಸಾ ದಾಸರ ಅವರೇ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅವಳಿ ನಗರದ 35ನೇ ವಾರ್ಡಿನಲ್ಲಿ ಈ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ನಾಗರತ್ನಾ ಶಿವಪ್ಪ ಮುಳಗುಂದ ಎಂಬ ಪ್ರಭಾವಿ ಅಭ್ಯರ್ಥಿಯ ವಿರುದ್ಧ ಭರ್ಜರಿ ಜಯ ಸಾದಿಸುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಪರಿಶಿಷ್ಟ ಜಾತಿಯಲ್ಲಿ ಬರುವ ದಾಸರ ಸಮುದಾಯ ರಾಜ್ಯದಲ್ಲಿ 52 ಸಾವಿರ ಜನಸಂಖ್ಯೆ ಹೊಂದಿದ್ದು, ರಾಜ್ಯದಲ್ಲಿಯೇ ಉಷಾ ಅವರು ಪ್ರಥಮ ಮಹಿಳಾ ನಗರಸಭೆ ಸದಸ್ಯರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅದರಂತೆ, 2001ರಲ್ಲಿ ಕೊಪ್ಪಳದ ನಗರಸಭೆ ಚುನಾವಣೆಯಲ್ಲಿ ಮಾಜಿ ನಗರಸಭೆ ಅಧ್ಯಕ್ಷರ ವಿರುದ್ಧ ಉಷಾ ದಾಸರ ಅವರ ತಂದೆ ವೆಂಕಟೇಶ ದಾಸರ ಗೆಲುವಿನ ನಗೆ ಬೀರಿದ್ದರು. ಸುಮಾರು 21 ವರ್ಷಗಳ ಬಳಿಕ ನೆರೆಯ ಗದಗ ಜಿಲ್ಲೆಯಲ್ಲಿ ತಂದೆಯ ಹಾದಿಯಲ್ಲಿಯೇ ಸಾಗಿದ ಮಗಳು ಉಷಾ ದಾಸರ ಸಹಿತ ಮಾಜಿ ಅಧ್ಯಕ್ಷರ ವಿರುದ್ಧವೇ ಜಯಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಪಕ್ಷೇತರರತ್ತ ಕಾಂಗ್ರೆಸ್ ಚಿತ್ತ

ಗದಗ-ಬೆಟಗೇರಿ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದರೂ, ಆಪರೇಷನ್ ಕಾಂಗ್ರೆಸ್ನ ಭೀತಿ ಶುರುವಾಗಿದೆ. ಬಿಜೆಪಿ 18 ಸ್ಥಾನಗಳಲ್ಲಿ ಜಯಸಿದ್ದು, ಕಾಂಗ್ರೆಸ್ 15 ಹಾಗೂ ಪಕ್ಷೇತರರು ಎರಡು ಸ್ಥಾನಗಳಲ್ಲಿ ಗೆದ್ದಿದ್ದಾರೆ. ಇನ್ನು ಗೆದ್ದಿರುವ ಪಕ್ಷೇತರ ಅಭ್ಯರ್ಥಿಗಳಿಬ್ಬರೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿರುವುದು ವಿಶೇಷ. ಹೀಗಾಗಿ ಪಕ್ಷೇತರರನ್ನು ತನ್ನತ್ತ ಸೆಳೆಯುವ ಮೂಲಕ ಸಂಖ್ಯೆ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ ಎನ್ನಲಾಗಿದೆ.

ಇತ್ತ ಬಿಜೆಪಿ ನಾಯಕರೂ ಸಹಿತ ಸೇಫರ್ ಸೈಡ್ ಆಗಿ ಪಕ್ಷೇತರ ಅಭ್ಯರ್ಥಿಗಳಿಗೆ ಗಾಳ ಹಾಕಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಪಕ್ಷೇತರರು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದೇ ಆದಲ್ಲಿ, ಬಿಜೆಪಿಗೆ ಮತ್ತಷ್ಟು ತಲೆನೋವು ಶುರುವಾಗಲಿದೆ. ಅಲ್ಲದೆ, 14 ವರ್ಷಗಳ ಬಳಿಕ ಸಿಕ್ಕಿರುವ ಸುವರ್ಣಾವಕಾಶ ‘ಕೈ’ ತಪ್ಪುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುವುದನ್ನು ಕಾದು ನೋಡಬೇಕಿದೆ.

ಪಕ್ಷದಿಂದ ಗೆದ್ದಿರುವ ಎಲ್ಲರೂ ಅಪ್ಪಟ ಬಿಜೆಪಿಗರು. ಅವರ ರಕ್ತದಲ್ಲೇ ಬಿಜೆಪಿ ಇದೆ. ನಮ್ಮವರನ್ನು ಹೈಜಾಕ್ ಮಾಡುವ ಅವಕಾಶ ಕಾಂಗ್ರೆಸ್ಗೆ ಕೊಡುವುದಿಲ್ಲ. ನಮ್ಮದು ಯುವ ಪಡೆಯಾಗಿದ್ದು, ಘಟಾನುಘಟಿಗಳಿಗೆ ಸೋಲಿನ ರುಚಿ ಉಣಬಡಿಸಿದ್ದಾರೆ. ಪಕ್ಷೇತರವಾಗಿ ಗೆದ್ದಿರುವ ಇಬ್ಬರು ಅಭ್ಯರ್ಥಿಗಳು ಕೂಡ ನಮ್ಮನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಅನಿಲ್ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡರು.