ವಿಜಯಸಾಕ್ಷಿ ಸುದ್ದಿ, ಡೆಹ್ರಾಡೂನ್
ದೇಶದಲ್ಲಿ ಕೊರೊನಾ ಹೆಚ್ಚಳವಾಗಲು ಧಾರ್ಮಿಕ ಕಾರ್ಯಕ್ರಮಗಳೇ ಕಾರಣ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಈ ಕುಂಭಮೇಳವನ್ನು ಕೋವಿಡ್ ಪ್ರೋಟೋಕಾಲ್ ಉಲ್ಲಂಘಿಸಿ ನಡೆಸಿತ್ತು. ಈಗ ಇದರ ವಿರುದ್ಧ ಉತ್ತರಾಖಂಡ ಹೈಕೋರ್ಟ್ ಆಕ್ರೋಶ ಹೊರಹಾಕಿದ್ದು, ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.
ಕೋವಿಡ್ ಹರಡಲು ಮೂಲ ಕಾರಣವಾದ ಕುಂಭಮೇಳದ ವಿಚಾರದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಆರ್.ಎಸ್. ಚೌಹಾಣ್ ಮತ್ತು ನ್ಯಾಯಮೂರ್ತಿ ಅಲೋಕ್ ವರ್ಮಾ ಅವರು, “ರಾಜ್ಯದಲ್ಲಿ ಈ ಕುಂಭಮೇಳ ಮತ್ತು ಚಾರ್ ಧಾಮ್ ಯಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಾಗ ಕೋವಿಡ್ ನಿಯಮಗಳನ್ನು ಅನುಸರಿಸಲಾಗಿದೆಯೇ..? ನಾವು ಮೊದಲು ಕುಂಭಮೇಳ ನಡೆಸಿ ತಪ್ಪುಮಾಡಿದ್ದೇವೆ, ಬಳಿಕ ಚಾರ್ ಧಾಮ್ ಯಾತ್ರೆ.. ಯಾಕೆ ನಾವು ಪದೇ ಪದೇ ಮುಜುಗರಕ್ಕೆ ಒಳಗಾಗುವ ಕೆಲಸ ಮಾಡುತ್ತೇವೆ..?” ಎಂದು ಉತ್ತರಾಖಂಡ ಸರ್ಕಾರವನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.
ಕೇದಾರನಾಥ ಮತ್ತು ಬದ್ರಿನಾಥ್ ದೇವಾಲಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹಾರಿದಾಡುತ್ತಿವೆ ಅವುಗಳನ್ನು ನೋಡಿ. ಅಲ್ಲಿ ಪುರೋಹಿತರೇ ದೈಹಿಕ ಅಂತರ ಕಾಪಾಡಿಕೊಂಡಿಲ್ಲ. ಇವುಗಳನ್ನೆಲ್ಲಾ ಬಗ್ಗೆ ನಿರ್ಧರಿಸುವುದು ನಮ್ಮ ಕೆಲಸವಲ್ಲ, ಸರ್ಕಾರದ ಕೆಲಸ. ನೀವು ನ್ಯಾಯಾಲಯವನ್ನು ಮೂರ್ಖರಾಗಿಸಬಹುದು, ಆದರೆ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಸರ್ಕಾರ ಲಕ್ಷಾಂತರ ಜನರ ಜೀವದೊಂದಿಗೆ ಆಟವಾಡುತ್ತಿದೆ. ಇದೊಂದು ನಿರ್ಲಕ್ಷ್ಯ ಸರ್ಕಾರ” ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.