Homekoppalಕೃಷ್ಣಾ ಮೇಲ್ದಂಡೆ 3 ನೇ ಹಂತದ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ

ಕೃಷ್ಣಾ ಮೇಲ್ದಂಡೆ 3 ನೇ ಹಂತದ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ

Spread the love

2018ರಲ್ಲೇ ಮುಗಿಯಬೇಕಿದ್ದ ಕಾಮಗಾರಿ ಇನ್ನೂ ಆಮೆ ವೇಗದಲ್ಲಿ

ಉತ್ತರ ಕರ್ನಾಟಕದ ಜನಪ್ರತಿನಿಧಿಗಳಿಗೆ ಬೇಕಿದೆ ಇಚ್ಛಾಶಕ್ತಿ

ವಿಜಯಸಾಕ್ಷಿ ಸುದ್ದಿ ಕೊಪ್ಪಳ: ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಕಳೆದೊಂದು ದಶಕದಿಂದ ಕುಂಟುತ್ತಲೇ ಸಾಗಿದೆ. ಪ್ರತಿ ಚುನಾವಣೆಯಲ್ಲೂ ಈ ವಿಷಯವನ್ನೇ ಮುಂದಿಟ್ಟುಕೊಂಡು ಜನರ ಬಳಿಗೆ ಬರುವ ಅಭ್ಯರ್ಥಿಗಳು ಚುನಾಯಿತರಾದ ನಂತರ ಮರೆತುಬಿಡುತ್ತಾರೆ.

ಇದು ಯಾವುದೋ ಒಂದು ಪಕ್ಷದ ವಿರುದ್ಧ ಮಾಡುತ್ತಿರುವ ಆರೋಪವಲ್ಲ. ಯೋಜನೆ ಅನುಷ್ಠಾನಗೊಳ್ಳಲು, ಜನರಿಗೆ, ರೈತರಿಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಎಂದು ರೈತಮುಖಂಡರು, ಪ್ರಗತಿಪರರಾದ ದೇವೇಂದ್ರಪ್ಪ ಬಳೂಟಗಿ ಆಗ್ರಹಿಸಿದರು.

ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯು.ಕೆ.ಪಿ 3ನೇ ಹಂತದ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಅಂತಿಮ ತೀರ್ಪಿನ ಅಧಿಸೂಚನೆ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈಗಲೂ ಸಹ ಯೋಜನೆ ಪೂರ್ಣಗೊಂಡಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರವಿರುವುದರಿಂದ ಎಲ್ಲ ಸಂಸದರು, ಶಾಸಕರು ಒತ್ತಡ ತಂದರೆ ಯೋಜನೆ ಪೂರ್ಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಪಕ್ಷಾತೀತ ಹೋರಾಟ ಮಾಡಲು ನಿರ್ಧರಿಸಿದ್ದು ಮೊದಲ ಹಂತದಲ್ಲಿ ಎಲ್ಲ ಜನಪ್ರತಿನಿಧಿಗಳಿಗೆ ಪತ್ರ ಬರೆಯುವುದರ ಮುಖಾಂತರ ಮನವಿ ಮಾಡಿಕೊಳ್ಳುತ್ತೇವೆ.

ಹಾಲಿ ಮತ್ತು ಮಾಜಿ ಸಂಸದರು, ಶಾಸಕರನ್ನು ಒಳಗೊಂಡ ನಿಯೋಗದಿಂದ ಸರಕಾರವನ್ನು ಭೇಟಿ ಮಾಡಲಾಗುವುದು. ಆ ಮೂಲಕ ಸರಕಾರದ ಮೇಲೆ ಒತ್ತಡ ಹಾಕಿ ಯೋಜನೆ ಪೂರ್ಣಗೊಳಿಸಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಕೃಷ್ಣಾ ನದಿಯ ವ್ಯಾಪ್ತಿಯ ಮಹಾರಾಷ್ಟ್ರ , ಕರ್ನಾಟಕ ಮತ್ತು ಆಂಧ್ರಪ್ರದೇಶಗಳಿಗೆ ನೀರು ಹಂಚಿಕೆ ಮಾಡಿ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯು 2010 ರಲ್ಲಿ ಐತೀರ್ಪು ನೀಡಿದೆ. ಅಲ್ಲದೆ , ಕಣಿವೆ ರಾಜ್ಯಗಳು ಐತೀರ್ಪಿನ ಸ್ಪಷ್ಟೀಕರಣ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಮಂಡಳಿ , 2013 ರಲ್ಲಿ ಅಂತಿಮ ವರದಿ ಸಲ್ಲಿಸಿದೆ. ಕೃಷ್ಣಾ ನ್ಯಾಯಾಧೀಕರಣ -2 ರ ಐತೀರ್ಪಿನಲ್ಲಿ ರಾಜ್ಯದ ಆಲಮಟ್ಟಿ ಜಲಾಶಯಕ್ಕೆ 130 T.M.C ನೀರು ಹಂಚಿಕೆಯಾಗಿದೆ. ಈ ನೀರನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲು ಜಲಾಶಯದ ಎತ್ತರವನ್ನು 519.6 ಮೀಟರ್ನಿಂದ 524.256 ಮೀಟರ್ವರೆಗೆ ಹೆಚ್ಚಿಸಬೇಕಾಗಿದೆ ಎಂದರು.

ಕಾನೂನು ಹೋರಾಟದಲ್ಲಿ ಯಶಸ್ಸು ಗಳಿಸಿದ ನಂತರವೂ , ಇವತ್ತಿನವರೆಗೂ ನೀರಾವರಿ ಯೋಜನೆಗಳಿಗೆ ಬಳಕೆಗೆ ಸಾಧ್ಯವಾಗುತ್ತಿಲ್ಲ . ಯೋಜನೆ ಎಷ್ಟೇ ಪ್ರಗತಿ ಸಾಧಿಸಿದರೂ ನೀರು ಬಳಕೆಯ ಮೇಲೆ ಹಕ್ಕು ಸಿಗುವುದು ಕೇಂದ್ರವು ಅಧಿಸೂಚನೆ ಹೊರಡಿಸಿದ ಬಳಿಕವಷ್ಟೇ. ಅಂತಿಮ ತೀರ್ಪಿನ ಅಧಿಸೂಚನೆ ಹೊರಡಿಸಲು ಕಾಲ ವಿಳಂಬ ನೀತಿಯಿಂದ ಏತನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದೇ ನನೆಗುದಿಗೆ ಬಿದ್ದಿವೆ. ಯೋಜನೆ ವಿಳಂಬವಾದಷ್ಟೂ ಒಂದಡೆ ಯೋಜನೆ ಗಾತ್ರ ಹೆಚ್ಚಾಗುತ್ತಾ ಹೋಗುತ್ತದೆ ಎಂದು ಅವರು ವಿವರಿಸಿದರು.

ಆದರೆ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ -3 ರ, ಒಳಪಡುವ ಹಲವಾರು ಏತ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಸಂಪೂರ್ಣವಾಗಿ ಕೈಗೊಳ್ಳಲು ಯಾವುದೇ ರೀತಿಯ ಕಾನೂನಾತ್ಮಕ ಅಡತಡೆಗಳು ಇರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಅಧಿಸೂಚನೆ ಪ್ರಕಟವಾಗಬೇಕು ಎನ್ನುವುದು ತಾಂತ್ರಿಕ ವಿಚಾರವಷ್ಟೇ. ಹೊಸ ಕಾಯಿದೆಯಂತೆ ಪುನರ್ವಸತಿ , ಭೂಪರಿಹಾರ ಹಾಗೂ ಪುನರ್ ನಿರ್ಮಾಣಕ್ಕೆ ರಾಜ್ಯ ಸರಕಾರ ಹಣಕಾಸಿನ ಅನುದಾನ ಹಂಚಿಕೆಗೆ ತಕ್ಷಣ ಕ್ರಮಕೈಗೊಳ್ಳಬೇಕು. ಈ ಕಾಮಗಾರಿ ಪೂರ್ಣಗೊಂಡರೆ ನೀರು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ವಿಷಯದ ಕುರಿತಾಗಿ ಸರಕಾರ ಇಚ್ಛಾಶಕ್ತಿ ತೋರಬೇಕು.

ಕೃಷ್ಣಾ ನ್ಯಾಯಾಧೀಕರಣ ಅಂತಿಮ ತೀರ್ಪಿನ ಅಧಿಸೂಚನೆ ಪ್ರಕಟಿಸುವಂತೆ ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ತರಬೇಕು . ಹಾಗೆಯೇ ಯು.ಕೆ.ಪಿ ಮೂರನೇ ಹಂತದ ಯೋಜನೆಯನ್ನು “ ರಾಷ್ಟ್ರೀಯ ಯೋಜನೆ ” ಎಂದು ಘೋಷಿಸುವಂತೆ ಕರ್ನಾಟಕ ಸರಕಾರ ಸರ್ವಪಕ್ಷ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ಮೂಲಕ , ಅದಕ್ಕೆ ಆದ್ಯತೆಯ ಮೇಲೆ ಹಣಕಾಸಿನ ವ್ಯವಸ್ಥೆ ಒದಗಿಸುವಂತೆ ಬೇಡಿಕೆ ಸಲ್ಲಿಸಬೇಕು ಎಂದರು.

ಆದ್ದರಿಂದ ಯೋಜನೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಸಂಸದರು ಮತ್ತು ಶಾಸಕರು ಒಳಗೊಂಡು ಸದರಿ ವಿಷಯದ ಕುರಿತಾಗಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ನೀರಾವರಿ ಸಚಿವರಿಗೆ ಮನವಿ ಕೊಡುವುದರ ಮೂಲಕ ಒತ್ತಡ ತರಬೇಕು . ಬರದ ನಾಡು ಎಂದು ಕರೆಸಿಕೊಳ್ಳುವ ಉತ್ತರ ಕರ್ನಾಟಕದ ಭೂಮಿಯನ್ನು ಹಸಿರಾಗಿಸಬಹುದು. ಅಧಿಸೂಚನೆ ಬಾರದಿರುವುದು ಈ ಎಲ್ಲಾ ಪ್ರಕ್ರಿಯೆಗೂ “ ತಡೆಗೋಡೆ ” ಯಾಗಿ ನಿಲ್ಲುವಂತಾಗಿದೆ . ಶೀಘ್ರವೇ ಅಧಿಸೂಚನೆ ತರಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಶಿ, ಬಸವರಾಜ್ ಡಿ, ಕೆ.ಚನ್ನಬಸವಸ್ವಾಮಿ ಕನಕಗಿರಿ, ಜಿಲ್ಲಾ ಪಂಚಾಯತ್ ಸದಸ್ಯ ಹನುಮಂತಗೌಡ ಮಾಲೀಪಾಟೀಲ್, ಅಪ್ಪು ಪಟ್ಟಣಶೆಟ್ರ, ಮಲ್ಲಿಕಾರ್ಜುನ ಮೇಟಿ ಮತ್ತಿತರರು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!