ವಿಜಯಸಾಕ್ಷಿ ಸುದ್ದಿ, ಗದಗ
ಗಾಯವಾಗಿದ್ದ ತಲೆಗೆ ಬ್ಯಾಂಡೇಜ್ ಮಾಡಿಸಿಕೊಳ್ಳಲು ಬಂದಿದ್ದ ಯುವಕನಿಗೆ ಕೋವಿಡ್ ಲಕ್ಷಣಗಳಿವೆಯೇ ಎಂದು ಕೇಳಿದ ವೈದ್ಯನಿಗೆ ಕಪಾಳಕ್ಕೆ ಬಾರಿಸಿ, ಅವಾಚ್ಯ ಶಬ್ದಗಳಿಂದ ಬೈದಾಡಿದ ಘಟನೆ ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯುವಕ ಮಲ್ಲಪ್ಪ ದುರಗಪ್ಪ ದೊಡ್ಡಮನಿ ಎಂಬಾತ ಕರ್ತವ್ಯ ನಿರತ ವೈದ್ಯ ಹಾಗೂ ಸಿಬ್ಬಂದಿಗೆ ಜೀವದ ಬೆದರಿಕೆ ಹಾಕಿದ್ದಾನೆ.

ಕುರ್ತಕೋಟಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ದಯಾನಂದ ರಾಮಚಂದ್ರಸಾ ಕಬಾಡಿ ಸೋಮವಾರ ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ಯುವಕನ ಮೇಲೆ ಸರಕಾರಿ ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದಗಳಿಂದ ನಿಂದನೆ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ವೈದ್ಯಕೀಯ ಸಂಸ್ಥೆಯ ಆಸ್ತಿ ಹಾನಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ
ಸೋಮವಾರ ಯುವಕ ಮಲ್ಲಪ್ಪ ದುರ್ಗಪ್ಪ ದೊಡ್ಡಮನಿ ತನ್ನ ತಲೆಗೆ ಆಗಿದ್ದ ಗಾಯಕ್ಕೆ ಬ್ಯಾಂಡೇಜ್ ಮಾಡಿಸಲು ಆರೋಗ್ಯ ಕೇಂದ್ರಕ್ಕೆ ಹೋಗಿದ್ದ. ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ದಯಾನಂದ ರಾಮಚಂದ್ರಸಾ ಕಬಾಡಿ ಎಂಬುವರು ನೆಗಡಿ, ಕೆಮ್ಮು ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಸಹಜವಾಗಿ ಕೊರೊನಾ ಲಕ್ಷಣಗಳ ಬಗ್ಗೆ ಕೇಳಿದಾಗ, ‘ಅಂತಹ ಯಾವುದೇ ಲಕ್ಷಣಗಳು ಇಲ್ಲ’ ಎಂದು ಯುವಕ, ಚಿಕಿತ್ಸೆ ಪಡೆದು ವಾಪಸ್ ಮನೆಗೆ ಹೋಗಿದ್ದಾನೆ. ಆಮೇಲೆ ವೈದ್ಯರು ಕೇಳಿದ ಪ್ರಶ್ನೆಯಿಂದ ಯುವಕನ ತಲೆ ಗಿರ್ ಅಂದಿದೆ. ಕೊರೊನಾ ಬಗ್ಗೆ ನನ್ನನ್ನೇಕೆ ಪ್ರಶ್ನಿಸಿದರು ಎಂದು ಯೋಚಿಸಿದವನೇ ಸೀದಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು, ‘ನನಗ್ಯಾಕ ಕೊರೊನಾ ಬಗ್ಗೆ ಕೇಳಿದ್ರೀ? ನನಗೆ ಕೊರೊನಾ ಇಲ್ಲ ಏನಿಲ್ಲ’ ಎಂದು ಡಾ| ದಯಾನಂದ ಅವರನ್ನು ಪ್ರಶ್ನಿಸಿದವನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ವೈದ್ಯರ ಕಪಾಳಕ್ಕೆ ಹೊಡೆದು ಕಚೇರಿಯೊಳಗಿದ್ದ ಕುರ್ಚಿ ಮುರಿದಿದ್ದಾನೆ. ಗಲಾಟೆ ಏಕೆ ಮಾಡುತ್ತಿದ್ದಿ? ಸುಮ್ಮನಿರು ಎಂದು ವೈದ್ಯರು, ಆಸ್ಪತ್ರೆ ಸಿಬ್ಬಂದಿ ಹೇಳಿದರೂ ಕೇಳಿಸಿಕೊಳ್ಳದ ಯುವಕ ವೈದ್ಯರಿಗೆ ಅಶ್ಲೀಲ ಪದಗಳನ್ನು ಬಳಸಿದ್ದಾನೆ. ಇದನ್ನು ಸಹಿಸದೆ ವೈದ್ಯರೂ ಆತನಿಗೆ ಸೂಕ್ತ ಉತ್ತರ ನೀಡಿದ್ದಾರೆ.

ಯುವಕ ಮಲ್ಲಪ್ಪ ದೊಡ್ಡಮನಿಯ ರಂಪಾಟ ಕೇಳಿ ಸ್ಥಳೀಯರೂ ಆರೋಗ್ಯ ಕೇಂದ್ರಕ್ಕೆ ಬಂದು, ಆತನಿಗೆ ಬುದ್ಧಿ ಹೇಳಿದ್ದಾರೆ. ಆದರೆ, ಯುವಕ ಅವರೊಂದಿಗೂ ವಾದಿಸಿದ್ದಾನೆ. ‘ಇನ್ನೊಮ್ಮೆ ನಾನು ದವಾಖಾನೆಗೆ ಬಂದರೆ ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮನ್ನು ಕೊಂದು ಬಿಡುವೆ’ ಎಂದು ಸಿಬ್ಬಂದಿಗೆ ಬೆದರಿಸಿದ್ದಲ್ಲದೆ, ‘ನನ್ನ ಮೇಲೆ ಕಂಪ್ಲೇಂಟ್ ಕೊಟ್ರ ಇನ್ನೂ ಮೂರು ಜನ ಇದ್ದಾರ… ನಿನ್ನ ನೋಡ್ಕೋತ್ತಾರ’ ಅಂತ ಧಮ್ಕಿ ಹಾಕಿದ್ದಾನೆ. ಇದರಿಂದಾಗಿ ವಿಚಲಿತರಾದ ವೈದ್ಯ ದಯಾನಂದ ಕಬಾಡಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.