ವಿಜಯಸಾಕ್ಷಿ ಸುದ್ದಿ, ಗದಗ:
ಭಾರತೀಯ ಭದ್ರತಾ ಪಡೆಗಳ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಧರ್ಮಪತ್ನಿ ಹಾಗೂ ಸೇನಾಧಿಕಾರಿಗಳು ಅಸುನಿಗಿದ್ದು ನೋವನ್ನುಂಟು ಮಾಡಿದ್ದು, ದೇಶದಲ್ಲೊಂದು ದುರ್ದೈವದ ಸಂಗತಿ ನಡೆಯಿತು ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ವಿಷಾದ ವ್ಯಕ್ತಪಡಿಸಿದರು.
ಶುಕ್ರವಾರ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಮುಳಗುಂದ ಪಟ್ಟಣ ಪಂಚಾಯತಿಯಲ್ಲಿ ಮತ ಚಲಾಯಿಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ತಮಿಳುನಾಡಿನ ಕೂನೂರಿನಲ್ಲಿ ಡಿ.೮ರಂದು ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತ ಪ್ರಕರಣದ ಕುರಿತು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಈ ಆಕ್ಸಿಡೆಂಟ್ ಯಾಕೆ ಆಯಿತು? ಹೇಗೆ ಆಯಿತು? ಎಂಬ ಬಗ್ಗೆ ತನಿಖೆಯಾಗಬೇಕು. ದೇಶದಲ್ಲಿ ಸೆಕ್ಯುರಿಟಿ ಮೇಜರ್ಸ್ ಎಷ್ಟು ಕನಿಷ್ಠ ಇವೆ. ಯಾವ ರೀತಿ ಲ್ಯಾಪ್ಸಸ್ ನಡೆದಿವೆ ಎಂಬುವುದಕ್ಕೆ ಈ ಘಟನೆ ಕನ್ನಡಿ ಇದ್ದಂತೆ. ಹೀಗಾಗಿ ಬಿಜೆಪಿ ಸರ್ಕಾರ ಪ್ರಕರಣವನ್ನು ಲಘುವಾಗಿ ಪರಿಗಣಿಸಬಾರದು. ಅಲ್ಲದೇ, ಪ್ರಕರಣದ ಕುರಿತು ತೀವ್ರ ಹಾಗೂ ಗಂಭೀರವಾದ ತನಿಖೆ, ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು.
ಸೇನಾ ಹೆಲಿಕಾಪ್ಟರ್ ದುರಂತದ ಬಗ್ಗೆ ಶಂಕಿಸಿ ಹೇಳುವುದು ಕಠಿಣವಾಗಿದೆ. ಹೀಗಾಗಿ ಸೂಕ್ತ ತನಿಖೆಯಾಗಬೇಕು. ತಕ್ಷಣ ಸೆಕ್ಯುರಿಟಿ ಲ್ಯಾಪ್ಸಸ್ ಆಗಬಹುದು. ಅವುಗಳು ಆಗದಂತೆ ಕ್ರಮ ಜರುಗಿಸಬೇಕು. ಕೇಂದ್ರ ಸರ್ಕಾರ ಮಹತ್ವದ ವ್ಯಕ್ತಿಗಳಿಗೆ ಹೇಗೆ ರಕ್ಷಣೆ ನೀಡಬೇಕೆಂದು ವಿಚಾರ ಮಾಡಬೇಕು. ಆದರೆ, ಬಿಜೆಪಿ ಸರ್ಕಾರ ದೇಶ ಸೇವೆಯಲ್ಲಿರುವವರನ್ನು ಲಘುವಾಗಿ ಪರಿಗಣಿಸುತ್ತಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.