- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುನಕುಂಟಿ ಗ್ರಾಮದಲ್ಲಿ ದುರ್ಘಟನೆ
ವಿಜಯಸಾಕ್ಷಿ ಸುದ್ದಿ, ವಿಜಯಪುರ
ನೀರು ಕುಡಿಯಲು ಕೃಷ್ಣಾ ನದಿಯ ಹಿನ್ನೀರಿಗೆ ಇಳಿದಾಗ ಕಾಲುಜಾರಿ ಗುಂಡಿಯಲ್ಲಿ ಬಿದ್ದ ಸೊಸೆಯನ್ನು ರಕ್ಷಿಸಲು ಹೋಗಿ ಅತ್ತೆಯೂ ನೀರುಪಾಲಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಹುನಕುಂಟಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಹುನಕುಂಟಿ ಗ್ರಾಮದ ಶಾಂತಮ್ಮ ಭೀಮನಗೌಡ ನಾಗೋಡ (20), ಗುರುಸಂಗಮ್ಮ ಭೀಮಪ್ಪ ಮುದೂರ(8) ಮೃತರು.
ದನ ಮೇಯಿಸಲೆಂದು ನದಿ ತೀರಕ್ಕೆ ಹೋಗಿದ್ದರು. ಬಾಯಾರಿಕೆ ಆಗಿದ್ದರಿಂದ ಸೊಸೆ ಗುರುಸಂಗಮ್ಮ ನೀರು ಕುಡಿಯಲೆಂದು ಹಿನ್ನೀರಿಗೆ ಇಳಿದಿದ್ದಾಳೆ. ನದಿ ತೀರದಲ್ಲಿ ಅಲ್ಲಲ್ಲಿ ಮಣ್ಣು ಅಗೆದ ಕಾರಣ ಆಳವಾದ ಗುಂಡಿಗಳಿದ್ದು, ಹಿನ್ನೀರಿನಿಂದ ಗುಂಡಿಗಳಲ್ಲಿ ನೀರು ಭರ್ತಿಯಾಗಿದೆ. ಇದನ್ನು ಅರಿಯದ ಗುರುಸಂಗಮ್ಮ ಕಾಲು ಜಾರಿ ಗುಂಡಿಯಲ್ಲಿ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಅತ್ತೆ ಶಾಂತಾ ರಕ್ಷಣೆಗೆ ಓಡಿ ಬಂದಿದ್ದು, ಆಕೆಯೂ ಆಳವಾದ ಗುಂಡಿಯಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಡಿಯಲ್ಲಿ ಮುಳುಗಿದ್ದ ಇಬ್ಬರ ಶವ ಹೊರ ತೆಗೆದರು. ಮುದ್ದೆಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.