ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳಿಗೆ 22 ವರ್ಷ ಜೈಲು ಶಿಕ್ಷೆ!!

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

Advertisement

ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ (ಪೋಕ್ಸೋ) ಶಂಕರ ಎಂ. ಜಾಲವಾದಿ ಅವರು ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣ-1: ಗಂಗಾವತಿ ತಾಲ್ಲೂಕಿನ ತೊಂಡಿಹಾಳ ಗ್ರಾಮದ ಚಂದ್ರಶೇಖರ ಎಂಬ ವ್ಯಕ್ತಿಯು ಅಪ್ರಾಪ್ತ ವಯಸ್ಸಿನ ಬಾಲಕಿಯು ಹೋಟೆಲ್‌ನಲ್ಲಿ ಒಬ್ಬಳೇ ಇದ್ದಾಗ ಅವಳಿಗೆ ಹೊರಗಿನಿಂದ ತಿಂಡಿ-ತಿನಿಸು ಮತ್ತು ಐಸ್‌ಕ್ರೀಂ ಕೊಟ್ಟು ಅವಳೊಂದಿಗೆ ಸಲುಗೆಯಿಂದ ಮಾತನಾಡುತ್ತಾ, ಮದುವೆಯಾಗುವುದಾಗಿ ನಂಬಿಸಿ, ಅವಳು ಶಾಲೆಗೆ ಹೋಗುತ್ತಿದ್ದಾಗ ಗ್ರಾಮದ ಯಮನಪ್ಪ ಮೂಲಿಮನಿ ಎಂಬಾತನ ಪ್ರಚೋದನೆಯಿಂದ ಮೋಟರ್ ಸೈಕಲ್ ಮೇಲೆ ಫಿರ್ಯಾದಿದಾರಳನ್ನು ಹಿಂಬಾಲಿಸಿ ಶಾಲೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಮೋಟರ್ ಸೈಕಲ್ ಹತ್ತಲು ಒತ್ತಾಯ ಮಾಡಿದ್ದು, ಹತ್ತದಿದ್ದಲ್ಲಿ ಎಣ್ಣೆ ಕುಡಿದು ಸಾಯುವುದಾಗಿ ಹೆದರಿಸಿ ನಂತರ 2016ರ ಮಾರ್ಚ್ 28 ಅವಳ ಇಚ್ಛೆಗೆ ವಿರುದ್ಧವಾಗಿ ಬಲತ್ಕಾರದಿಂದ ಅತ್ಯಾಚಾರ ಮಾಡಿರುವ ಆರೋಪವು ತನಿಖೆಯಲ್ಲಿ ಸಾಬೀತಾಗಿದ್ದರಿಂದ ಆರೋಪಿತನ ವಿರುದ್ಧ ಗಂಗಾವತಿ ಗ್ರಾಮೀಣ ವೃತ್ತ ಸಿಪಿಐ ಪ್ರಭಾಕರ್ ಎಸ್.ಧರ್ಮಟ್ಟಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.


ಪ್ರಕರಣದ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 12 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.50 ಸಾವಿರಗಳ ದಂಡ ವಿಧಿಸಿ, ದಂಡದ ಮೊತ್ತದಲ್ಲಿ ರೂ. 40 ಸಾವಿರಗಳನ್ನು ಸಂತ್ರಸ್ತಳಿಗೆ ನೀಡುವಂತೆ ಮತ್ತು ಬಾಧಿತ ಬಾಲಕಿಗೆ ಅತ್ಯಾಚಾರ ನಡೆಸಲು ಚಂದ್ರಶೇಖರನಿಗೆ ಪ್ರಚೋದನೆ ನೀಡಿದ ಯಮನಪ್ಪ ಮೂಲಿಮನಿ ಈತನ ಮೇಲಿನ ಆಪಾದನೆ ಸಾಬೀತಾಗಿಲ್ಲವೆಂದು ಬಿಡುಗಡೆ ಮಾಡಿ ನ್ಯಾಯಾಧೀಶರು ತೀರ್ಪು ಹೊರಡಿಸಿದ್ದಾರೆ.

ಪ್ರಕರಣ-2: ಕುಷ್ಟಗಿ ತಾಲ್ಲೂಕಿನ ಬಳೂಟಗಿ ಗ್ರಾಮದ ರಾಜಾ ಅಲಿಯಾಸ್ ರಾಜಾಸಾಬ್ ನದಾಫ್ ಎಂಬ ಆರೋಪಿತನು 2016ರ ಡಿಸೆಂಬರ್ 14 ರಂದು ಸಂಜೆ 05 ಗಂಟೆ ಸುಮಾರಿಗೆ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಗ್ರಾಮದ ಹೊರವಲಯದಲ್ಲಿ ಕರೆದುಕೊಂಡು ಬಂದು ಆಕೆಗೆ ಅತ್ಯಾಚಾರವೆಸಗಿ ನಂತರ ಬೆಂಗಳೂರಿನ ಕೋಣನಕುಂಟೆ ಏರಿಯಾದ ಒಂದು ಶೆಡ್ಡಿನಲ್ಲಿಟ್ಟು ಅವಳನ್ನು ಅತ್ಯಾಚಾರ ಮಾಡಿದ ಆರೋಪವು ತನಿಖೆಯಲ್ಲಿ ಸಾಬೀತಾಗಿದ್ದರಿಂದ ಆರೋಪಿತನ ವಿರುದ್ಧ ಕುಷ್ಟಗಿ ವೃತ್ತ ಸಿಪಿಐ ಗಿರೀಶ್ ಪಿ.ರೋಡಕರ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.35 ಸಾವಿರಗಳ ದಂಡ ವಿಧಿಸಿ, ದಂಡದ ಮೊತ್ತದಲ್ಲಿ ರೂ. 20 ಸಾವಿರಗಳನ್ನು ಸಂತ್ರಸ್ತಳಿಗೆ ನೀಡುವಂತೆ ನ್ಯಾಯಾಧೀಶರು ತೀರ್ಪು ಹೊರಡಿಸಿರುತ್ತಾರೆ.

ಈ ಎರಡೂ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಪ್ರಕರಣವನ್ನು ನಡೆಸಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here