ನವದೆಹಲಿ: ದೇಶದಲ್ಲಿ ಲಾಕ್ಡೌನ್ ಜಾರಿಯಾಗಲಿದೆ ಎಂಬ ವದಂತಿಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಳ್ಳಿಹಾಕಿದ್ದು, ಅವು ಸಂಪೂರ್ಣ ಆಧಾರರಹಿತ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ 2026ರ ಹಣಕಾಸು ಮಸೂದೆಯ ಚರ್ಚೆಯ ವೇಳೆ ಮಾತನಾಡಿದ ಅವರು, “ದೇಶಾದ್ಯಂತ ಅನಾವಶ್ಯಕ ಭಯ ಹುಟ್ಟಿಸುವ ವದಂತಿಗಳು ಹರಡುತ್ತಿವೆ. ಲಾಕ್ಡೌನ್ ಎಲ್ಲಿ ನಡೆಯುತ್ತಿದೆ? ಪಾಕಿಸ್ತಾನದಲ್ಲಿ ಇಂತಹ ಪರಿಸ್ಥಿತಿ ಇರಬಹುದು, ಆದರೆ ಭಾರತದಲ್ಲಿ ಇಲ್ಲ” ಎಂದು ಹೇಳಿದರು.
ಸಾರ್ವಜನಿಕರು ಮತ್ತು ರಾಜಕೀಯ ನಾಯಕರು ಅಪ್ರಮಾಣಿತ ಮಾಹಿತಿಯನ್ನು ಹಂಚಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಬಾರದು ಎಂದು ಅವರು ಎಚ್ಚರಿಸಿದರು.
ಇನ್ನೂ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, “ಅವರ ಸಂಕಷ್ಟವನ್ನು ತೋರಿಸಲು ಅಲ್ಲ, ವಾಸ್ತವಿಕ ಹೋಲಿಕೆಗೆ ಮಾತ್ರ ಹೇಳುತ್ತಿದ್ದೇನೆ. ಉತ್ತಮ ನೆರೆಹೊರೆಯ ದೇಶವಾಗಿ, ಅಗತ್ಯವಿದ್ದಲ್ಲಿ ಭಾರತ ಸಹಾಯ ನೀಡಲು ಸಿದ್ಧವಾಗಿದೆ” ಎಂದು ತಿಳಿಸಿದ್ದಾರೆ.
“ನಮ್ಮ ದೇಶದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಇಲ್ಲ. ಜನರು ವದಂತಿಗಳಿಗೆ ಒಳಗಾಗಬಾರದು” ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.



