ಹಿರಿತನ ಪರಿಗಣಿಸಿ ಡಿಸಿಎಂ ಮಾಡುವ ನಿರೀಕ್ಷೆಯಿದೆ! ಮೈಸೂರಿನಲ್ಲಿ ಕೆ.ಎಸ್. ಈಶ್ವರಪ್ಪ ಹೇಳಿಕೆ
ವಿಜಯಸಾಕ್ಷಿ ಸುದ್ದಿ, ಮೈಸೂರು
ಮುಖ್ಯಮಂತ್ರಿ ಅಂತೂ ಮಾಡಲಿಲ್ಲ. ಹಿರಿತನ ಆಧರಿಸಿ ಉಪ ಮುಖ್ಯಮಂತ್ರಿಯನ್ನಾದರೂ ಮಾಡುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ಹಲವು ವರ್ಷಗಳ ಕಾಲ ದುಡಿದಿದ್ದೇನೆ. ಹೀಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಬಹುದು ಎಂದು ಬೆಂಬಲಿಗರು ನಿರೀಕ್ಷೆ ಮಾಡಿದ್ದರು. ಪಕ್ಷದ ಹೈಕಮಾಂಡ್ ಬೊಮ್ಮಾಯಿ ಅವರುನ್ನ ಸಿಎಂ ಮಾಡಿದೆ. ಈಗ ಈಶ್ವರಪ್ಪ ಉಪಮುಖ್ಯಮಂತ್ರಿ ಆಗಲಿ ಎಂದು ಸ್ವಾಮೀಜಿಗಳು, ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಯಡಿಯೂರಪ್ಪ ನವರು 4 ಬಾರಿ ಮುಖ್ಯಮಂತ್ರಿ ಆದರು. ಜನ ನಮಗೆ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಆದರೆ, ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಕೆಲವು ಗೊಂದಲಗಳು ಇದ್ದದ್ದು ನಿಜ. ಈ ಎಲ್ಲ ಗೊಂದಲಗಳನ್ನು ಹೈಕಮಾಂಡ್ ಬಗೆಹರಿಸಿದೆ ಎಂದು ಹೇಳಿದರು.
ಯಾರನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಬಿಡಬೇಕು ಎಂಬುದು ಹೈಕಮಾಂಡ್ ಗೆ ಗೊತ್ತಿದೆ. ನಮಲ್ಲಿನ ಗೊಂದಲ ಬಗೆಹರಿದಿದೆ, ಈಗ ಕಾಂಗ್ರೆಸ್ ನಲ್ಲಿ ಗೊಂದಲ ಶುರು ಆಗಿದೆ.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ತನ್ವೀರ್ ಸೇಠ್, ಎಂ.ಬಿ. ಪಾಟೀಲ್ ನಾನೇ ಸಿಎಂ ಎಂದು ಹೇಳಿಕೊಳ್ಳುತ್ತಿದ್ದಾರೆ. ಇವರಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಅವರ ಹೈಕಮಾಂಡ್ ಘೋಷಿಸಲಿ ಎಂದು ಸವಾಲು ಹಾಕಿದರು.