ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಸ್ನಾನ ಮಾಡಲೆಂದು ಕೆರೆಗೆ ತೆರಳಿದ್ದ ಒಂದೇ ಕುಟುಂಬದ ಇಬ್ಬರು ಯುವಕರು ನೀರುಪಾಲಾದ ಘಟನೆ ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ಇಂದು ನಡೆದಿದೆ.
ಕಾಶೀಂ ನದಾಫ್ (23) ಹಾಗೂ ಶರೀಫ್ ನದಾಫ್ (20) ಮೃತ ದುರ್ದೈವಿಗಳು. ಸಹೋದರರಿಬ್ಬರು ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಹಳೇ ಕೆರೆಗೆ ಸ್ನಾನ ಮಾಡಲು ತೆರಳಿದ್ದರು.
ಮೊದಲು ಕಾಶೀಂ ಸ್ನಾನಕ್ಕೆಂದು ಕೆರೆಗೆ ಇಳಿದಿದ್ದು, ಈಜಲು ಬಾರದೆ ನೀರಿನಲ್ಲಿ ಮುಳುಗಲಾರಂಭಿಸಿದ್ದು, ಈತನ ಸಹಾಯಕ್ಕೆ ಶರೀಫ್ ಧಾವಿಸಿದ್ದಾನೆ. ಆದರೆ ಆತನಿಗೂ ಈಜು ಬಾರದೇ ಇಬ್ಬರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಗರಗ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ಸಹಾಯದಿಂದ ಯುವಕರ ಮೃತದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೊಹರಂ ಹಬ್ಬದಂದೇ ಸಹೋದರರಿಬ್ಬರ ಸಾವು ಗ್ರಾಮದಲ್ಲಿ ಶೋಕ ಮಡುಗಟ್ಟವಂತೆ ಮಾಡಿದೆ.
ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.