ನವೆಂಬರ್ ತಿಂಗಳಲ್ಲಿ ಸಮ್ಮೇಳನ

0
10th District Kannada Sahitya Conference postponed due to rain
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ರೋಣ ರಸ್ತೆಯಲ್ಲಿನ ಪ್ರವಾಸಿ ಮಂದಿರದಲ್ಲಿ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲರ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.

Advertisement

ಸಭೆಯಲ್ಲಿ ಆ.23, 24ರಂದು ನಿಗದಿ ಮಾಡಿದ್ದ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲರ ಅಭಿಪ್ರಾಯಗಳನ್ನು ಪಡೆದು ಮಳೆ ಮತ್ತು ಸ್ಥಳದ ಸಮಸ್ಯೆಯಿಂದ ನ.8, 9 ಮತ್ತು 10ರಂದು ನಡೆಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕೋಟೆ ನಾಡು ಗಜೇಂದ್ರಗಡ ಪಟ್ಟಣ ಸಾಹಿತ್ಯಿಕ, ಸಾಂಸ್ಕೃತಿಕ, ಪ್ರಾಕೃತಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಮೃದ್ಧವಾಗಿದೆ. ಇಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಮಾಡಲು ನಿರ್ಧರಿಸಲಾಗಿತ್ತು. ಈ ಹಿಂದೆ ಫೆಬ್ರುವರಿ ತಿಂಗಳಲ್ಲಿ ನಿಗದಿಯಾಗಿದ್ದ ಸಮ್ಮೇಳನ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಆಗಸ್ಟ್ ತಿಂಗಳಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದ್ದು, ಮಳೆಗಾಲ ಆಗಿರುವುದರಿಂದ ಸ್ವಲ್ಪ ಅಳುಕಿದೆ.

ಸಾರ್ವಜನಿಕವಾಗಿ ವ್ಯಾಪಕ ಸಂಘಟನೆ ಮಾಡಲು ಸ್ವಾಗತ ಸಮಿತಿ ಅಧ್ಯಕ್ಷರ ಜವಾಬ್ದಾರಿ ಇರುತ್ತದೆ. ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಶಾಸಕರು ಸ್ಥಳ ಮತ್ತು ದಿನಾಂಕ ನಿಗದಿ ಮಾಡಿದರೆ ಮುಂದಿನ ರೂಪುರೇಷೆ ನಡೆಸಲು ಸಹಕಾರಿ ಎಂದರು.

ಚರ್ಚೆ ಬಳಿಕ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರು ನವೆಂಬರ್ 8, 9, 10ರಂದು ಸಮ್ಮೇಳನಕ್ಕೆ ದಿನಾಂಕ ಘೋಷಿಸಿದರು. ಈ ಸಭೆಯಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ಅಮರೇಶ ಗಾಣಿಗೇರ, ಪುರಸಭೆ ಸದಸ್ಯ ರಾಜು ಸಾಂಗ್ಲಿಕರ, ವೀರಣ್ಣ ಶೆಟ್ಟರ, ಬಸವರಾಜ ಶೀಲವಂತರ, ಶಶಿಧರ ಹೂಗಾರ, ಎಫ್.ಎಸ್. ಕರಿದುರಗಣ್ಣವರ, ಶರಣಪ್ಪ ಚಳಗೇರಿ, ಶಂಕ್ರಣ್ಣ ಸಂಕಣ್ಣವರ, ಬಸವರಾಜ ಕೊಟಗಿ, ಪುಂಡಲೀಕ ಕಲ್ಲಿಗನೂರ ಸೇರಿ ಇತರರು ಇದ್ದರು.

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯ ವಲಯಕ್ಕೆ ಮಾತ್ರವಲ್ಲದೆ ನಮ್ಮೆಲ್ಲರಿಗೂ ಮಹತ್ವದ ಕಾರ್ಯಕ್ರಮವಾಗಿದೆ. ಹೀಗಾಗಿ ಈ ಸಮ್ಮೇಳನಕ್ಕೆ ಯಾವುದೇ ತೊಂದರೆಗಳು ಬಾರದಂತೆ ಅದ್ದೂರಿಯಾಗಿ ನಡೆಸಲು ನಾವೇಲ್ಲರೂ ಶ್ರಮಿಸಬೇಕಿದೆ. ಆಗಸ್ಟ್ ತಿಂಗಳಲ್ಲಿ ಮಳೆ ಹೆಚ್ಚಾಗಿರುವುದರಿಂದ ಸಮ್ಮೇಳನಕ್ಕೆ ತೊಂದರೆಯಾಗುತ್ತದೆಂಬುದು ಎಲ್ಲರ ಅಭಿಪ್ರಾಯ. ಹೀಗಾಗಿ ನವೆಂಬರ್ ತಿಂಗಳಲ್ಲಿ ಸಮ್ಮೇಳನ ನಡೆಸಲು ದಿನಾಂಕ ನಿಗದಿ ಮಾಡಿ ಎಂದರು.

 


Spread the love

LEAVE A REPLY

Please enter your comment!
Please enter your name here