ವಿಜಯಸಾಕ್ಷಿ ಸುದ್ದಿ, ಗದಗ
ಲಾಕ್ ಡೌನ್ ವೇಳೆಯಲ್ಲಿ ಬಿಜೆಪಿ ಕಾರ್ಯಕರ್ತನ ಬೈಕ್ ಬಿಡದೇ ಇದ್ದ ಕಾರಣಕ್ಕಾಗಿ ಮಹಿಳಾ ಎಎಸ್ಐ ಒಬ್ಬರು ಸಸ್ಪೆಂಡ್ ಆದ ಘಟನೆ ಗದಗನಲ್ಲಿ ನಡೆದಿದೆ.
ಬೆಟಗೇರಿ ಠಾಣೆಯ ಮಹಿಳಾ ಎಎಸ್ಐ ಎನ್ ಸಿ ಮೂಲಿಮನಿ ಎಂಬುವವರೇ ಅಮಾನತು ಆದವರು. ಕೋವಿಡ್ ತಡೆಗಟ್ಟಲು ಸರಕಾರ, ಜಿಲ್ಲಾಡಳಿತದ ಆದೇಶ ಪಾಲಿಸಿದ ಮಹಿಳಾ ಎಎಸ್ಐ ಈಗ ಅಮಾನತು ಶಿಕ್ಷೆಗೆ ಒಳಗಾದವರು.
ಕೋವಿಡ್ ನಿಯಂತ್ರಣ ಮಾಡಲು ಸರಕಾರ ಲಾಕ್ ಡೌನ್ ಜಾರಿ ಮಾಡಿದೆ. ಅನಗತ್ಯ ಸಂಚಾರ, ಓಡಾಟ ಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಎಸ್ಪಿ ಸಾಹೇಬರು ಅನಗತ್ಯ ವಾಹನ ಓಡಾಟ ಕಂಡು ಬಂದಲ್ಲಿ ದಂಡ, ಸೀಜ್ ಮಾಡಲು ತಮ್ಮ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೋವಿಡ್ ವೇಳೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದಿಷ್ಟು ಅಧಿಕಾರಿಗಳು, ಪೊಲೀಸರು, ಯಾರ ಮುಲಾಜಿಗೂ ಬಗ್ಗದೇ ಮೇಲಾಧಿಕಾರಿಗಳ, ಸರಕಾರದ ಆದೇಶ ಪಾಲನೆ ಮಾಡುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹೀಗೆ ಮೊನ್ನೆ ಮೇ 17 ರಂದು ಮಧ್ಯಾಹ್ನ ಬೆಟಗೇರಿಯ ಟಿಂಗಿನಕಾಯಿ ಬಜಾರನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಎಎಸ್ಐ ಎನ್ ಸಿ ಮೂಲಿಮನಿ ಅವರು, ಬೈಕ್ ತಡೆದಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತ ಅಂತ ಹೇಳಿದ ಆತ, ಸೀದಾ ಶಾಸಕ ಕಳಕಪ್ಪ ಬಂಡಿ ಅವರಿಗೆ ಕಾಲ್ ಮಾಡಿ ಕೊಟ್ಟಿದ್ದಾನೆ. ಆ ಕಡೆಯಿಂದ ಮಾತನಾಡುವವರು ಯಾರು ಅಂತ ಗೊತ್ತಾಗದೇ ಸಹಜವಾಗಿ ಪೊಲೀಸ್ ಭಾಷೆಯಲ್ಲಿ ಮಾತನಾಡಿದ್ದಾರೆ. ಇದರಿಂದ ಕೆರಳಿ ಕೆಂಡಮಂಡಲವಾದ ಶಾಸಕರು ಮಹಿಳಾ ಎಎಸ್ಐ ಮೇಲೆ ಎಗರಾಡಿದ್ದಾರೆ. ಮೊದಲೇ ಒರಟು ಸ್ವಭಾವದ ಶಾಸಕರು ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿ ಯಾರ ನೋಡ್ರೀ ಆ ಎಎಸ್ಐ ಅಂತ ಹೇಳಿದ್ದಾರೆ.
ಅಷ್ಟಕ್ಕೆ ಈಗ ಈ ಮಹಿಳಾ ಎಎಸ್ಐ ಅವರು ಸಸ್ಪೆಂಡ್ ಆಗಿದ್ದಾರೆ. ಇದೀಗ ಈ ವಿಷಯ ಪೊಲೀಸ್ ವಲಯ, ಸಾರ್ವಜನಿಕ ಚರ್ಚೆಯ ವಿಷಯವಾಗಿದೆ.