ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಅಕ್ಕಾಮಹಾದೇವಿ ದೇವಸ್ಥಾನದಲ್ಲಿ ಪೂಜ್ಯ ಶ್ರೀ ಸಿದ್ದೇಶ್ವರ ಸತ್ಸಂಗ ಬಳಗ, ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ, ಅಕ್ಕಮಹಾದೇವಿ ಬಳಗ, ಪ್ರೇಮಕ್ಕ ಅಭಿಮಾನಿ ಬಳಗ ಸಹಯೋಗದಲ್ಲಿ 19ನೇ ವರ್ಷದ ಶ್ರಾವಣ ಸಂಜೆ ಕಾರ್ಯಕ್ರಮ ಆ.5ರಿಂದ ಸೆ.3ರವರೆಗೆ ನಡೆಯಲಿದೆ ಎಂದು ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ ಮತ್ತು ಹಿರಿಯ ಸಾಹಿತಿ ಲಲಿತಕ್ಕ ಕೆರಿಮನಿ ಹೇಳಿದರು.
ಅವರು ಶನಿವಾರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಶ್ರಾವಣ ಮಾಸದುದ್ದಕ್ಕೂ ನಡೆಯುವ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದರು.
ಜು.5ರ ಸೋಮವಾರ ಸಂಜೆ 6ಕ್ಕೆ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಹೂವಿನಶಿಗ್ಲಿಯ ವೀರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯದಲ್ಲಿ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾಗರಾಜ ಅರಳಿ ಶ್ರಾವಣ ಸಂಜೆ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ವಹಿಸುವರು. ಅತಿಥಿಗಳಾಗಿ ಚಂದ್ರಣ್ಣ ಮಹಾಜನಶೆಟ್ಟರ, ಡಾ. ಪರಶುರಾಮ ಬಾರ್ಕಿ, ಡಾ. ಶಿವಾನಂದ ಹೂವಿನ, ಎಲ್.ಎಸ್. ಅರಳಹಳ್ಳಿ, ನಿರ್ಮಲಾ ಅರಳಿ ಉಪಸ್ಥಿತರಿರುವರು.
ಸೆಪ್ಟೆಂಬರ್ 3ರಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಕಳೆದ 18 ವರ್ಷಗಳಿಂದ ವಿವಿಧ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ಶ್ರಾವಣ ಮಾಸದಲ್ಲಿ ಧಾರ್ಮಿಕ ಚಿಂತನ-ಮಂಥನ, ಸತ್ಸಂಗದಂತಹ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ ಎಂದು ತಿಳಿಸಿದರು.
ಈ ವೇಳೆ ಕದಳಿ ಮಹಿಳಾ ವೇದಿಕೆಯ ಕಾರ್ಯದರ್ಶಿ ರತ್ನಾ ಕರ್ಕಿ, ಮಹಿಳಾ ಬಳಗದ ಸದಸ್ಯರಾದ ಅಶ್ವಿನಿ ಅಂಕಲಕೋಟಿ, ಪ್ರತಿಮಾ ಮಹಾಜನಶೆಟ್ಟರ, ವಿನುತಾ ಅರಳಿ, ಲತಾ ತಟ್ಟಿ, ಕಾಂಚನಾ ಹಸರಡ್ಡಿ, ಕವಿತಾ ಅರಳಹಳ್ಳಿ, ರೇಖಾ ವಡಕಣ್ಣನವರ, ಗಂಗಾಧರ ಅರಳಿ, ಶೈಲಾ ಆದಿ, ಶಕುಂತಲಾ ವಡಕಣ್ಣವರ, ಜಯಶ್ರೀ ಮತ್ತಿಗಟ್ಟಿ, ಎಂ.ಕೆ. ಕಳ್ಳಿಮಠ, ಬಸವರಾಜ ಬೆಂಡಿಗೇರಿ, ಪಾರ್ವತಿ ಕಳ್ಳಿಮಠ, ಶೋಭಾ ಗಾಂಜಿ, ಶಾರದಾ ಬಟಗುರ್ಕಿ, ವಿಜಯ ಹುಬ್ಬಳ್ಳಿ ಸೇರಿ ಹಲವರಿದ್ದರು.
ಈ ಕಾರ್ಯಕ್ರಮಗಳ ರೂವಾರಿಯಾಗಿದ್ದ ದಿ. ಪ್ರೇಮಕ್ಕ ಬಿಂಕದಕಟ್ಟಿ ಅವರ ಅಗಲುವಿಕೆಯ ನಡುವೆಯೂ ಶ್ರಾವಣ ಮಾಸದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಿತ್ಯ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಶರಣರು, ಸಾಹಿತಿಗಳು, ಸಾಮಾಜಿ ಚಿಂತಕರು, ಸಂಪನ್ಮೂಲ ವ್ಯಕ್ತಿಗಳು, ಉಪನ್ಯಾಸಕರು ವಿಷಯ ಮಂಡನೆ ಮಾಡಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.