ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡ ವಾಲ್ಮಿ ಸಂಸ್ಥೆಯು ಸುಸ್ಥಿರ ಜಲ ಮತ್ತು ನೆಲ ನಿರ್ವಹಣೆಯ ಕ್ಷೇತ್ರದಲ್ಲಿ ದೇಶದಲ್ಲಿಯೇ ಆಶಾಕಿರಣವಾದ ಸಂಸ್ಥೆಯಾಗಿದೆ. ವಾಲ್ಮಿ ಸಂಸ್ಥೆಯು ಜಲ ಮತ್ತು ನೆಲ ಕುರಿತು ತರಬೇತಿ, ಸಂಶೋಧನೆ, ಸಮುದಾಯ ಸಂಘಟನೆ, ಜಲ ಜಾಗೃತಿ ಕುರಿತು ರಾಜ್ಯಕ್ಕೆ ಅಗಾಧ ಸೇವೆಯನ್ನು ನೀಡಿದೆ ಎಂದು ಪುಣೆಯ ರಾಷ್ಟ್ರೀಯ ಜಲ ಅಕಾಡೆಮಿ ನಿರ್ದೇಶಕ ಇಂ. ಮಿಲಿಂದ ಪಾನಪಾಟೀಲ ಹೇಳಿದರು.
ಅವರು ಗುರುವಾರ ಬೆಳಿಗ್ಗೆ ವಾಲ್ಮಿ ಸಭಾಂಗಣದಲ್ಲಿ ಆಯೋಜಿಸಲಾದ 39ನೇ ವಾಲ್ಮಿ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಲ ಮತ್ತು ನೆಲ ಸಂಪನ್ಮೂಲಗಳು ನಾಗರಿಕತೆಯ ಭದ್ರ ಬುನಾದಿಯಾಗಿವೆ. ಜನ ಸಂಖ್ಯಾ ಬೆಳವಣಿಗೆ, ನಗರೀಕರಣ ಮತ್ತು ಇತ್ತೀಚಿನ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಜಲ, ನೆಲ ನಿರ್ವಹಣೆ ಅತ್ಯಂತ ಪ್ರಮುಖ ಸವಾಲಾಗಿದೆ. ಈ ನಿಟ್ಟಿನಲ್ಲಿ ಧಾರವಾಡ ವಾಲ್ಮಿಯು ರಾಷ್ಟçದ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಕಾರ್ಯ ಸೂಚಿಗಳಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ವಾಲ್ಮಿ ಸಂಸ್ಥೆಯು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜಲ ಶಕ್ತಿ ಯೋಜನೆ, ಅಟಲ್ ಭೂ ಜಲ ಯೋಜನೆ, ರಾಷ್ಟ್ರೀಯ ಜಲ ಆಂದೋಲನ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ ಎಂದು ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಡಾ. ಎಂ.ವಿ. ಮಂಜುನಾಥ, ಧಾರವಾಡ ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಮಂಜುನಾಥ ಘಾಟೆ, ಮಲಪ್ರಭಾ ಯೋಜನಾ ವಲಯದ ಮುಖ್ಯ ಅಭಿಯಂತರ ಅಶೋಕ ವಾಸನದ, ಆರ್ ನಾಗಣ್ಣ, ಜಲ ಸಂಪನ್ಮೂಲ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿಯಂತರರು, ಕಾಡಾ ಇಲಾಖೆಯ ಅಧಿಕಾರಿಗಳು, ರೈತರು, ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರು, ಉಪಾಧ್ಯಕ್ಷರು, ನೀರಾವರಿ ನಿರ್ವಹಣೆಯ ಎಲ್ಲ ಭಾಗೀದಾರರು ಮತ್ತು ವಾಲ್ಮಿ ಸಂಸ್ಥೆಯ ಅಧಿಕಾರಿಗಳು, ಬೋಧಕರು, ಸಮಾಲೋಚಕರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಡಾ. ಎಂ ಚಂದ್ರ ಪೂಜಾರಿ ಮಾತನಾಡಿ, ಕೃಷಿ ಮತ್ತು ಗ್ರಾಮೀಣ ಬದುಕು ಅತ್ಯಂತ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕೆ ಮೂಲ ಕಾರಣ ಜಲ ಮತ್ತು ನೆಲ ಸಮಸ್ಯೆ. ಜೊತೆಗೆ ಯುವಕರು ಕೃಷಿಯನ್ನು ತೊರೆಯುತ್ತಿರುವುದು ಕಳವಳಕಾರಿಯಾಗಿದೆ. ಈ ಎಲ್ಲ ಸಮಸ್ಯೆಗಳು ಹವಾಮಾನ ವೈಪರಿತ್ಯದಿಂದ ಇನ್ನಷ್ಟು ಉಲ್ಬಣಗೊಂಡಿವೆ ಎಂದು ಹೇಳಿದರು.