ಶಿವಮೊಗ್ಗ: ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ನಮ್ಮ ಸಮಾಜಕ್ಕೆ ಮತ್ತೊಂದು ಸಚಿವ ಸ್ಥಾನ ಕೊಡಿ ಎಂದು ಕೇಳುತ್ತೇವೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಶ್ರೀ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು,
ನಮ್ಮ ಸಮಾಜದ 4 ಜನ ಎಂ.ಎಲ್.ಎ. ಇಬ್ಬರು ಸಚಿವರಿದ್ದಾರೆ. ಆದ್ದರಿಂದ ಮತ್ತೊಂದು ಸಚಿವ ಸ್ಥಾನಕ್ಕೆ ನಾವು ಬೇಡಿಕೆ ಸಲ್ಲಿಸುತ್ತೇವೆ.ಸಮಾಜದ ಹಕ್ಕು, ಹಿತಾಸಕ್ತಿ ಮತ್ತು ಅಭಿವೃದ್ಧಿ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು 2026ರ ಜನವರಿ 6ರಿಂದ ಕರದಾಳದ ಶಕ್ತಿಪೀಠದಿಂದ ಬೆಂಗಳೂರಿನವರೆಗೆ 700 ಕಿಲೋಮೀಟರ್ ದೂರದ 41 ದಿನಗಳ ಪಾದಯಾತ್ರೆಯನ್ನು ಕೈಗೊಳ್ಳಲಾಗುತ್ತಿದೆ.
ಈಡಿಗ, ಬಿಲ್ಲವ, ನಾಮಧಾರಿ, ಧೀವರ, ತೀಯ ಸೇರಿದಂತೆ 26 ಪಂಗಡಗಳನ್ನು ಒಳಗೊಂಡ ಸಮಾಜದ ಹಲವು ಬೇಡಿಕೆಗಳು ಈ ಪಾದಯಾತ್ರೆಯ ಪ್ರಮುಖ ಕಾರಣವಾಗಿವೆ. ಪ್ರಣವಾನಂದ ಶ್ರೀಗಳು ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ನಿಧಿ ಬಿಡುಗಡೆ, ಕಲ್ಯಾಣ ಕರ್ನಾಟಕದ ಸಂತ್ರಸ್ತ ಈಡಿಗರಿಗೆ ಭೂಮಿ ಮಂಜೂರು, ಸಮಾಜವನ್ನು ST ಮೀಸಲಾತಿಗೆ ಸೇರಿಸಲು ಶಿಫಾರಸು, ವಿಧಾನಸೌಧ ಎದುರು ನಾರಾಯಣಗುರುಗಳ ಪುತ್ಥಳಿ ಸ್ಥಾಪನೆ,
ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಮೇಲಿನ ಮೊಕ್ಕದ್ದಮೆ ಹಿಂತೆಗೆದು ದೇವಾಲಯಕ್ಕೆ ರಕ್ಷಣೆ ನೀಡುವುದು ಸೇರಿದಂತೆ ಸರ್ಕಾರ ತಕ್ಷಣ ಗಮನಿಸಬೇಕಾದ ಹಲವು ವಿಷಯಗಳನ್ನು ಉಲ್ಲೇಖಿಸಿದರು. ಜೊತೆಗೆ ಮದ್ಯ ಮಾರಾಟ ಪರವಾನಗಿಯಲ್ಲಿ ಸಮಾಜದ ಸದಸ್ಯರಿಗೆ ಹೆಚ್ಚಿನ ಅವಕಾಶ ನೀಡಬೇಕು ಹಾಗೂ ಹೊಸನಗರವನ್ನು ಮರು ವಿಧಾನಸಭೆ ಕ್ಷೇತ್ರವಾಗಿ ಗುರುತಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದೂ ಅವರು ತಿಳಿಸಿದರು.
ಪಾದಯಾತ್ರೆಯ ಮೂಲಕ ಇವೆಲ್ಲ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ನ್ಯಾಯ ಪಡೆಯುವ ವಿಶ್ವಾಸವಿರುವುದಾಗಿ ಪೀಠಾಧಿಪತಿ ಪ್ರಣವಾನಂದ ಶ್ರೀಗಳು ಹೇಳಿದ್ದಾರೆ.



