ವಿಜಯಸಾಕ್ಷಿ ಸುದ್ದಿ, ರೋಣ : ನರೇಗಾ ಯೋಜನೆಯಡಿಯಲ್ಲಿ ಕೂಲಿಕಾರರಿಗೆ ಇದ್ದೂರಲ್ಲೇ ಕೆಲಸಗಳು ಸಿಗುತ್ತವೆ. ಹೀಗಾಗಿ ಯಾರೂ ಗುಳೆ ಹೋಗುವ ಸಂದರ್ಭ ಉದ್ಭವಿಸದು. ನರೇಗಾ ಯೋಜನೆಯು ಕಾರ್ಮಿಕ ಸ್ನೇಹಿ ವಾತವರಣ ಹೊಂದಿದೆ ಎಂದು ಅಬ್ಬಿಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ. ಅಭಿಪ್ರಾಯಪಟ್ಟರು.
ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಮೇ-1, ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನರೇಗಾ ಕೂಲಿಕಾರರ ಜೊತೆಗೆ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಆಚರಿಸಿ ಅವರು ಮಾತನಾಡಿದರು.
ನರೇಗಾ ಯೋಜನೆಯಡಿಯಲ್ಲಿ ಕೂಲಿಕಾರ್ಮಿಕರಿಗೆ ಅಧಿಕ ಸೌಲಭ್ಯಗಳಿವೆ. ಕೂಲಿಕಾರ ಕೇಂದ್ರೀಕೃತ ಯೋಜನೆಯಾಗಿದ್ದು, ದೇಶಾದ್ಯಂತ ಸಾಮಾನ್ಯ ಕೂಲಿಕಾರರ ಆರ್ಥಿಕ ಜೀವನಕ್ಕೆ ನರೇಗಾ ಯೋಜನೆ ಸಹಾಯಕವಾಗಿದೆ. ನರೇಗಾ ಯೋಜನೆಯಡಿ ಕೆಲಸ ಮಾಡುವ ಸಂದರ್ಭದಲ್ಲಿ ಕೂಲಿಕಾರರು ಮೃತರಾದರೆ 2 ಲಕ್ಷ ರೂ.ವರೆಗೆ ಪರಿಹಾರ ನೀಡುವ ವ್ಯವಸ್ಥೆಯಿದೆ. ಕೆಲಸ ಮಾಡುವ ಸಂದರ್ಭದಲ್ಲಿ ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ದಣಿವಾರಿಸಿಕೊಳ್ಳಲು ನೆರಳಿನ ವ್ಯವಸ್ಥೆ ಮಾಡುವುದು ಯೋಜನೆಯಲ್ಲಿದೆ.
ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸುವ ದಿನವಾಗಿದ್ದು, ಕಾರ್ಮಿಕಪರ ಹೋರಾಟಗಾರರ ಶ್ರಮದ ಫಲದಿಂದ ಇಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳಲ್ಲಿ ಕಾರ್ಮಿಕರಿಗೆ ಅಧಿಕ ಸೌಲಭ್ಯಗಳು ಸಿಗುವಂತಾಗಿವೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಕೂಲಿಕಾರರು ಸಂಭ್ರಮಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನರೇಗಾ ಕೂಲಿಕಾರರು ಕಾರ್ಮಿಕ ದಿನಾಚರಣೆಗೆ ಸಿದ್ಧಪಡಿಸಿದ ವಿಶೇಷ ಕೇಕ್ನ್ನು ಕಾರ್ಮಿಕರೇ ಕತ್ತರಿಸುವ ಮೂಲಕ ಇನ್ನಿತರ ಕೂಲಿಕಾರರಿಗೆ ಕೇಕ್ ತಿನಿಸಿ ಕಾರ್ಮಿಕ ದಿನಾಚರಣೆಯ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಅಬ್ಬಿಗೇರಿ ಗ್ರಾ.ಪಂ ಸಿಬ್ಬಂದಿ ವರ್ಗ, ನರೇಗಾ ಸಿಬ್ಬಂದಿ ವರ್ಗ ಮತ್ತು ಕೂಲಿಕಾರರು ಭಾಗವಹಿಸಿದ್ದರು.