ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಬಸವಣ್ಣನವರ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡು, ಸಮಾಜದಲ್ಲಿ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿದ ಮಹಾನ್ ಸಂತ ಚನ್ನವೀರ ಸ್ವಾಮಿಗಳು ಎಂದು ಮುಂಡರಗಿಯ ಡಾ.ನಾಡೋಜ ಶ್ರೀ ಅನ್ನದಾನೇಶ್ವರ ಮಹಾಶಿವಯೋಗಿಗಳು ತಿಳಿಸಿದರು.
ತಾಲೂಕಿನ ಅರಸನಾಳು ಗ್ರಾಮದ ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿ ಚನ್ನವೀರಸ್ವಾಮಿ ಶಾಖಾಮಠದ ಜೀರ್ಣೋದ್ಧಾರ ಕಾರ್ಯಕ್ರಮ ಹಾಗೂ ಪುರಾಣ ಮಂಗಲೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮಗಳ ನೇತೃತ್ವ ವಹಿಸಿ ಅವರು ಮಾತನಾಡಿದರು.
ಮನುಷ್ಯನು ಯಾವುದೇ ಕೆಲಸ-ಕಾರ್ಯಗಳಲ್ಲಿ ತೊಡಗಿಕೊಂಡು ನಿಷ್ಠೆ, ಶ್ರದ್ಧಾ ಭಕ್ತಿಯಿಂದ ನಿರ್ವಹಿಸಿದಲ್ಲಿ ಭಗವಂತನ ಕೃಪೆಗೆ ಪಾತ್ರನಾಗುತ್ತಾನೆ. ಚನ್ನವೀರಸ್ವಾಮಿಗಳು ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ, ಸರ್ವಧರ್ಮೀಯರ ಸಮಾನತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಶರಣರಾಗಿದ್ದಾರೆ ಎಂದರು.
ಗುಡ್ಡದ ವಿರಕ್ತ ಮಠ ಚನ್ನಬಸವ ಶಿವಯೋಗಿ ಸ್ವಾಮಿಗಳು ಮಾತನಾಡಿ, ಮಠಗಳೆಂದರೆ ಜೀವಂತ ಮಂದಿರಗಳಿದ್ದಂತೆ. ನಾಡಿನಲ್ಲಿ ಸಾವಿರಾರು ಮಠಗಳು ಉಚಿತವಾಗಿ ಶಿಕ್ಷಣ ಮತ್ತು ಅನ್ನದಾಸೋಹಗಳನ್ನು ನಡೆಸುತ್ತಾ ದೀನ-ದಲಿತ ಮಕ್ಕಳ ಬಾಳಿಗೆ ಬೇಳಕನ್ನು ನೀಡುತ್ತಾ ಬಂದಿವೆ ಎಂದರು.
ವಕೀಲ ಪ್ರಕಾಶ ಪಾಟೀಲ್ ಮಾತನಾಡಿ, ಒಂದೂವರೆ ವರ್ಷಗಳ ಸತತ ಪ್ರಯತ್ನ ಮತ್ತು ಊರಿನ ಎಲ್ಲಾ ಸಮಾಜದವರ ಸಹಕಾರದಿಂದ, ರೂ.65 ಲಕ್ಷಕ್ಕೂ ಅಧಿಕ ಖರ್ಚಿನೊಂದಿಗೆ ಚನ್ನವೀರಸ್ವಾಮಿಗಳ ದೇವಸ್ಥಾನವು ಯಶಸ್ವಿಯಾಗಿ ಸಿದ್ಧವಾಗಿದೆ. ಇಂತಹ ಧಾರ್ಮಿಕ ಕಾರ್ಯದಲ್ಲಿ ಕಡು ಬಡವನಾದರೂ ದೇವಸ್ಥಾನ ನಿರ್ಮಾಣಕ್ಕಾಗಿ 45 ಸಾವಿರ ರೂ.ಗಳನ್ನು ದೇಣಿಗೆ ನೀಡಿದ್ದಾನೆ ಎಂದು ದಾನಿ ಲಕ್ಕಪ್ಪ ಅವರನ್ನು ಸ್ಮರಿಸಿದರರು.
ವೇದಿಕೆಯಲ್ಲಿ ಗುಡ್ಡದ ವಿರಕ್ತ ಮಠ ಚನ್ನಬಸವ ಶಿವಯೋಗಿ ಸ್ವಾಮಿ, ಚನ್ನವೀರ ಶಿವಯೋಗಿ ಸ್ವಾಮಿ ಲಿಂಗನಾಯಕನಹಳ್ಳಿ, ಶಾಂತಲಿಂಗ ದೇಶೀಕೇಂದ್ರ ಸ್ವಾಮಿಗಳು ಅರಸೀಕೆರೆ, ಶಿವಕುಮಾರ ಸ್ವಾಮಿ ದಳವಾಹಿಮಠ ಹಾವನೂರು, ಶ್ರೀಕಾಂತರೆಡ್ಡಿ, ಹೆಚ್. ರುದ್ರಪ್ಪ, ಗಿರಿರಾಜರೆಡ್ಡಿ, ಶ್ರೀಧರ, ಡಿ. ವಿಠೋಬಪ್ಪ, ಬಸವರಾಜಪ್ಪ ಬಣಕಾರ, ಕೂಭ್ಯಾನಾಯ್ಕ, ಪ್ರಭಾವತಿ ಕೃಷ್ಣ ಪಾಟೀಲ್, ಜಗನ್ನಾಥ ರೆಡ್ಡಿ ಮುಂತಾದವರಿದ್ದರು.