ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಸರ್ಕಾರದ ಸಾಲ ಸೇರಿ ಸಕಲ ಸೌಲಭ್ಯಗಳನ್ನು ಪಟ್ಟಣದಲ್ಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ತಲುಪಿಸುವ ಕಾರ್ಯ ಪುರಸಭೆಯಿಂದ ನಡೆಯುತ್ತಿದೆ ಎಂದು ಪುರಸಭೆ ಯೋಜನಾಧಿಕಾರಿ ಬಿ.ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ಬೀದಿ ಬದಿ ಪಟ್ಟಣ ವ್ಯಾಪಾರಿ ಸಮಿತಿ ಹಾಗೂ ಪುರಸಭೆಯಿಂದ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಬಂದಿದ್ದ ಅನುದಾನವನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಈಗಾಗಲೇ ಮಾಡಿದ್ದೇವೆ. ಸ್ಥಳೀಯ ಬೀದಿ ಬದಿ ವ್ಯಾಪಾರಿಗಳ ಸರ್ವೇ ಕಾರ್ಯದೊಂದಿಗೆ ಅವರಿಗೆ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಯನ್ನು ವಿತರಿಸಲು ಬೇಕಾದ ಕಾರ್ಯಗಳು ಕೊನೆಯ ಹಂತದಲ್ಲಿದ್ದು, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿಳಂಬವಾಗಿದೆ ಎಂದ ಅವರು, ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳ ಹಿತ ಕಾಪಾಡಲು ಹಾಗೂ ಅವರಿಗೆ ಜಾಗೃತಿ ಮೂಡಿಸಲು ಸಭೆಗಳ ಜತೆಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ ಎಂದರು.
ಬೀದಿ ಬದಿ ವ್ಯಾಪಾರಿಗಳ ಸಂಘಟನೆಯ ಜಿಲ್ಲಾಧ್ಯಕ್ಷ ಭಾಷೇಸಾಬ ಕರ್ನಾಚಿ ಮಾತನಾಡಿ, ಪಟ್ಟಣದಲ್ಲಿನ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಬರುವ ಸಾಲ ಸೇರಿ ಅನೇಕ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿ, ಯೋಜನಾ ಅಧಿಕಾರಿಗಳು ಮಾಡುತ್ತಾ ಬಂದಿದ್ದಾರೆ. ಪರಿಣಾಮ ಗಜೇಂದ್ರಗಡ ಪುರಸಭೆಯು ಜಿಲ್ಲೆಯಲ್ಲಿನ ಎಲ್ಲ ಸ್ಥಳೀಯ ಸಂಸ್ಥೆಗಳಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ 10ರಿಂದ 50 ಸಾವಿರ ರೂ.ವರೆಗೆ ಸಾಲವನ್ನು ಪಡೆದಿರುವ ಬೀದಿ ಬದಿ ವ್ಯಾಪಾರಿಗಳು ಸಾಲದ ಕಂತುಗಳನ್ನು ಸಹ ತುಂಬುತ್ತಿದ್ದು, ಈಗಾಗಲೇ ಪ್ರತಿಯೊಬ್ಬ ವ್ಯಾಪಾರಿ ರೂ.1 ಲಕ್ಷ ಸಾಲ ಸೌಲಭ್ಯವನ್ನು ಪಡೆದಿದ್ದಾರೆ ಎಂದು ಹೇಳಿದರು.
ಈ ವೇಳೆ ಚಂದ್ರಶೇಖರ ರಾಠೋಡ, ಹುಲ್ಲಪ್ಪ ತಳವಾರ, ಕವಿತಾ ಹೆಬ್ಬಾಳ, ರಾಜೇಸಾಬ ಕಟ್ಟಿಮನಿ, ಚೌಡಮ್ಮ ಹೆಲ್ಪು ಸೇರಿ ಉಮಾ ಚೌವ್ಹಾಣ, ಸುಕನ್ಯಾ ಸೇರಿ ಇತರರು ಇದ್ದರು.
ಅನೇಕ ವ್ಯಾಪಾರಿಗಳಿಗೆ ಆರೋಗ್ಯ ವಿಮೆಯನ್ನು ಮಾಡಿಸಲಾಗಿದೆ. ಸ್ಥಳೀಯ ವ್ಯಾಪಾರಿಗಳಿಂದ ಶುಲ್ಕವನ್ನು ಸಂಗ್ರಹಿಸಲಾಗಿದ್ದು, ಬೀದಿ ಬದಿ ವ್ಯಾಪಾರಿ ಸಮಿತಿಗೆ ಅಂದಾಜು ರೂ.40 ಸಾವಿರ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಟಿವಿಸಿಯಿಂದ ಕರ ವಸೂಲಿ ನಡೆಸಲು ಅರ್ಜಿ ಸಲ್ಲಿಸಲಾಗುವುದು. ಸರ್ಕಾರದಿಂದ ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ಬಂದಿದ್ದ ಅನುದಾನ ಹಾಗೂ ಹಣ ಸರ್ಕಾರಕ್ಕೆ ಹಿಂಬಡ್ತಿಯಾದ ಮಾಹಿತಿಯಿಲ್ಲ ಎಂದು ಭಾಷೇಸಾಬ ಕರ್ನಾಚಿ ತಿಳಿಸಿದರು.