ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಕಳಸಾಪೂರ ಗ್ರಾಮದ ತಾಂಡಾದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯ ಗದಗ ವಿದ್ಯಾರ್ಥಿಗಳು 21 ದಿನದ ಗ್ರಾಮ ವಾಸ್ತವ್ಯ ಮತ್ತು ಅಧ್ಯಯನ ಶಿಬಿರವನ್ನು ಹಮ್ಮಿಕೊಂಡಿದ್ದು, ಗ್ರಾಮದ ತಾಂಡಾದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕುರಿತಾದ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸ್ವಚ್ಛ ಭಾರತ ಮಿಷನ್ನ ನೈರ್ಮಲ್ಯ ಮತ್ತು ಶುಚಿತ್ವ ಅಧಿಕಾರಿ ಕೃಷ್ಣ ದೊಡ್ಡಮನಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಅಂದಾಗ ಮಾತ್ರ ರೋಗ-ರುಜಿನಗಳಿಂದ ಮುಕ್ತವಾದ ಜೀವನ ಸಾಗಿಸಲು ಸಾಧ್ಯ. ನೈರ್ಮಲ್ಯ ಮತ್ತು ಶುಚಿತ್ವಕ್ಕಾಗಿ ನಾವು ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇವೆ ಅದರ ಪ್ರಯೋಜನವನ್ನು ಗ್ರಾಮಸ್ಥರು ಪಡೆಯಬೇಕೆಂದು ಹೇಳಿದರು.
ಬಸವಕೇಂದ್ರದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡಿ, ಬಸವಣ್ಣನವರು ನಿರಂತರ ವೈಯಕ್ತಿಕ ಆಧ್ಯಾತ್ಮಿಕ ಬೆಳವಣಿಗೆಯನ್ನು ಆಳವಾದ ಜ್ಞಾನೋದಯದ ಮಾರ್ಗವಾಗಿ ಒತ್ತಿ ಹೇಳಿದರು. ಸರ್ವ ಜನಾಂಗಕ್ಕೆ ಜಾತಿ ಬೇಧವನ್ನು ತೊಡೆದು ಹಾಕಿ ಮನುಷ್ಯ ಜನ್ಮ ಸಾರ್ಥಕತೆಯನ್ನು ಪಡೆಯಲು ಜನಸಾಮಾನ್ಯರಿಗೆ ತಿಳಿಯುವ ಹಾಗೆ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸಿ ಜನತೆಯಲ್ಲಿ ಜಾಗೃತಿಯನ್ನು ಮೂಡಿಸಿದರು ಎಂದರು.
ಆಶಾ ಕಾರ್ಯಕರ್ತೆ ಬಿ.ಎಚ್. ಓಲೇಕಾರ, ಕೃಷ್ಣಾ ದೊಡ್ಡಮನಿ, ಸುರೇಶ ಲಮಾಣಿ, ಸಿ.ಎ. ಮಾದರ, ಡಿ.ಎಮ್. ಚವ್ಹಾಣ ಉಪಸ್ಥಿತರಿದ್ದರು. ಯಲ್ಲಪ್ಪ ಬ.ಕೊಪ್ಪದ ಸ್ವಾಗತಿಸಿ ನಿರೂಪಿಸಿದರು.