ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯದು. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ. ಮಕ್ಕಳ ಬಾಳಲ್ಲಿ ಜ್ಞಾನ ಜ್ಯೋತಿ ಬೆಳಗಿಸಿ ಅವರನ್ನು ಸತ್ಪçಜೆಗಳನ್ನಾಗಿ ರೂಪಿಸುವ ಶಿಲ್ಪಿಗಳಾದ ಶಿಕ್ಷಕರನ್ನು ಜೀವನದುದ್ದಕ್ಕೂ ಪೂಜ್ಯನೀಯ ಭಾವನೆಯಿಂದ ಕಾಣಬೇಕು ಎಂದು ಬಿಸಿಎನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಲೋಹಿತ್ ನೆಲವಿಗಿ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಪಟ್ಟಣದ ಬಿಸಿಎನ್ ಸ್ಪೆಕ್ಟ್ರಮ್ ಇಂಗ್ಲೀಷ್ ಮೀಡಿಯಂ ಸ್ಕೂಲ್ನ 25ನೇ ವರ್ಷದ ಬೆಳ್ಳಿಹಬ್ಬದ ಸಂಭ್ರಮ ಮತ್ತು ಮಹಾಸಾಂಸ್ಕೃತಿಕ ಮೇಳ ಕಾರ್ಯಕ್ರಮದ ಮೊದಲ ದಿನವಾದ ಶುಕ್ರವಾರ ಗುರುವಂದನಾ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ. ಹಾಗಾಗಿ ಈ ಸಮಾಜದಿಂದ ಪಡೆದ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕೆ ಹಿಂದಿರುಗಿಸಬೇಕು. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ ಎಂದರು.
ನಿರ್ದೇಶಕಿಯರಾದ ಡಾ. ರೇವತಿ ಲೋಹಿತ ನೆಲವಗಿ, ಶಿಲ್ಪಾ ಪ್ರಶಾಂತ ನೆಲವಿಗಿ ಮಾತನಾಡಿ, ಗುರು-ಶಿಷ್ಯ ಪರಂಪರೆ ಶ್ರೇಷ್ಠವಾಗಿದ್ದು, ಸಾಧಕರ ಸಾಧನೆಯ ಹಿಂದೆ ಗುರುವಿನ ಶ್ರೀರಕ್ಷೆ ಇರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದರೂ ನೈತಿಕ ಮೌಲ್ಯಗಳು, ಸಂಸ್ಕೃತಿಯನ್ನು ರೂಡಿಸುವ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ. ಭವಿಷ್ಯದ ಭವ್ಯ ನಾಗರಿಕರನ್ನು ರೂಪಿಸುವಲ್ಲಿ ಎಂದಿಗಿಂತಲೂ ಇಂದು ಶಿಕ್ಷಕರಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ ಎಂದರು.
ಸಂಸ್ಥೆಯ ಮುಖ್ಯಸ್ಥರಾದ ಲತಾದೇವಿ ನೆಲವಗಿ, ಶಿಕ್ಷಕರಾದ ಸುವರ್ಣಾ ಜಬಡಿ, ಕಾಂಚನಾ ಕುಲಕರ್ಣಿ, ಪುಪ್ಷಾ ಶಿಗ್ಲಿ, ಸುಮಲತಾ ಪಾಟೀಲ, ಸವಿತಾ ಮಳಿಮಠ, ಭವ್ಯಾ ಕತ್ತಿ, ಆರ್.ಎಂ. ಕದಡಿ, ಆರ್.ಎನ್. ಹುರಕಡ್ಲಿ, ಸಿ.ಬಿ. ಪಲ್ಲೇದ, ಸುಧಾ ಸಂಭಾಜಿ, ಶಾಂಭವಿ ಅಕ್ಕೂರ, ವಿಶಾಲಾಕ್ಷಿ ಬಾರ್ಕಿ, ರಜಿಯಾ ನದಾಫ್, ಸಂತೋಷ ಶೆಟ್ಟರ, ಎಸ್.ಸಿ. ಹೂವಿನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಾಲೆಯ ಆಡಳಿತಾಧಿಕಾರಿ ನಾಗರಾಜ ಯಂಡಿಗೇರಿ ಪ್ರಾಸ್ತಾವಿಕ ಮಾತನಾಡಿ, ಶಿಕ್ಷಣ ಸೇವೆಯೇ ದೇವರ ಸೇವೆ ಎಂಬ ಸದುದ್ದೇಶದಡಿ ಬಿಸಿನ್ ವಿದ್ಯಾ ಸಂಸ್ಥೆ 25 ವರ್ಷಗಳ ಕಾಲ ಸಾವಿರಾರು ಮಕ್ಕಳ ಭವಿಷ್ಯ ಬೆಳಗಿಸುವ ಕಾರ್ಯ ಮಾಡಿದೆ. ಸಂಸ್ಥೆ ಮತ್ತು ಶಿಕ್ಷಕರ ಕಾರ್ಯ ಶ್ಲಾಘನೀಯ. ಇದೀಗ ಈ ಶಿಕ್ಷಣ ಸಂಸ್ಥೆ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೊಸತನದೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.